ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಪೆಕ್ಸ್ ಕೌನ್ಸಿಲ್ ಭಾನುವಾರ ವಿವಿಧ ವಿಚಾರಗಳ ಕುರಿತು ಚರ್ಚಿಸಲು ವರ್ಚುವಲ್ ಸಭೆ ನಡೆಸಲಿದೆ. ಹಾಲಿ ದೇಶೀಯ ಕ್ರಿಕೆಟ್ ಋತುವಿನಲ್ಲಿ ಪ್ರತಿಷ್ಠಿತ ರಣಜಿ ಟ್ರೋಫಿ ಟೂರ್ನಿಯನ್ನು ಆಯೋಜಿಸುವ ಕುರಿತು ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ.
ಮಂಡಳಿಯ ಹಾಲಿ ಯೋಜನೆಯ ಪ್ರಕಾರ, ಈ ಬಾರಿ ಎರಡು ಹಂತಗಳಲ್ಲಿ ರಣಜಿ ಟ್ರೋಫಿ ಆಯೋಜಿಸುವ ಸಾಧ್ಯತೆ ಇದೆ. ಫೆಬ್ರವರಿ-ಮಾರ್ಚ್ನಲ್ಲಿ ಲೀಗ್ ಪಂದ್ಯಗಳನ್ನು ನಡೆಸಿ, ಏಪ್ರಿಲ್-ಮೇನಲ್ಲಿ ಐಪಿಎಲ್ 14ನೇ ಆವೃತ್ತಿ ನಡೆದ ಬಳಿಕ ನಾಕೌಟ್ ಪಂದ್ಯಗಳನ್ನು ಆಯೋಜಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
ಇದನ್ನೂ ಓದಿ: ಕೃನಾಲ್-ಹಾರ್ದಿಕ್ ಪಾಂಡ್ಯ ಸಹೋದರರಿಗೆ ಪಿತೃವಿಯೋಗ
ಹಾಲಿ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಬಯೋ-ಬಬಲ್ ಮಾದರಿಯಲ್ಲೇ ರಣಜಿ ಟ್ರೋಫಿಯನ್ನೂ ಆಯೋಜಿಸಲು ಬಿಸಿಸಿಐ ರೂಪುರೇಷೆ ರೂಪಿಸಿದೆ. ಈ ಮೂಲಕ 1934ರಿಂದ ಪ್ರತಿವರ್ಷವೂ ನಡೆಯುತ್ತ ಬಂದಿರುವ ರಣಜಿ ಟ್ರೋಫಿ ಈ ವರ್ಷವೂ ರದ್ದಾಗದಂತೆ ನೋಡಿಕೊಳ್ಳಲು ಬಿಸಿಸಿಐ ಬಯಸಿದೆ.
7 ಅಜೆಂಡಾಗಳ ಸಭೆ
ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆ ಒಟ್ಟು 7 ಅಜೆಂಡಾಗಳನ್ನು ಹೊಂದಿದೆ. 2023-31ರ ಐಸಿಸಿ ಎಫ್ಟಿಪಿ ವೇಳಾಪಟ್ಟಿ ಬಗ್ಗೆ ಚರ್ಚೆ ನಡೆಯಲಿದ್ದು, 2022ರಲ್ಲಿ ತಂಡಗಳ ಸಂಖ್ಯೆ 10ಕ್ಕೆ ಏರಲಿರುವುದರಿಂದ ಐಪಿಎಲ್ಗೆ ಹೆಚ್ಚಿನ ಅವಧಿಯನ್ನು ಕೇಳುವ ನಿರೀಕ್ಷೆ ಇದೆ. ಈ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ತೆರಿಗೆ ವಿನಾಯಿತಿ ಪಡೆಯುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ತೆರಿಗೆ ವಿನಾಯಿತಿಗೆ ಕೇಂದ್ರ ಸರ್ಕಾರ ಒಪ್ಪದಿದ್ದರೆ ಏನು ಮಾಡುವುದು ಎಂಬ ಬಗ್ಗೆಯೂ ಸಭೆಯಲ್ಲಿ ಪರಿಹಾರ ಕಂಡುಕೊಳ್ಳಬೇಕಾಗಿದೆ.
ಬೆಂಗಳೂರಿನಲ್ಲಿ ಹೊಸದಾಗಿ ನಿರ್ಮಾಣಗೊಳ್ಳಲಿರುವ ಎನ್ಸಿಎ ಕಟ್ಟಡದ ಕಾಮಗಾರಿಯ ಬಗ್ಗೆಯೂ ಪರಿಶೀಲನೆ ನಡೆಯಲಿದೆ. ಬಿಹಾರ ಕ್ರಿಕೆಟ್ ಸಂಸ್ಥೆಯಲ್ಲಿ (ಬಿಸಿಎ) ಇತ್ತೀಚೆಗೆ ಮತ್ತೆ ಭಿನ್ನಮತ ಭುಗಿಲೆದ್ದಿದ್ದು, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಬಿಸಿಎಯಿಂದ 2 ತಂಡಗಳು ಪ್ರಕಟಗೊಂಡು ಗೊಂದಲ ಸೃಷ್ಟಿಯಾಗಿತ್ತು. ಹೀಗಾಗಿ ಬಿಸಿಎ ಬೆಳವಣಿಗೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಿರೀಕ್ಷಿಸಲಾಗಿದೆ.
ದೇಶೀಯ ಟಿ20ಯಲ್ಲಿ ಮಿಂಚುತ್ತಿದ್ದಾರೆ ಕೇದಾರ್ ಜಾಧವ್, ಸಿಎಸ್ಕೆ ಫ್ಯಾನ್ಸ್ ಏನಂದರು ಗೊತ್ತೇ?