ಶ್ರೀನಗರ: ಇಂದು ಮುಂಜಾನೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾದ ಬಳಿ ಪೊಲೀಸರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಪೊಲೀಸರ ಗುಂಡೇಟಿಗೆ ಮೂವರು ಉಗ್ರರು ಹತರಾಗಿರುವುದು ವರದಿಯಾಗಿದೆ.
ಇಂದು ಮುಂಜಾನೆ ಸ್ಥಳೀಯ ಪೊಲೀಸರು ಮತ್ತು ಸಿಪಿಆರ್ಎಫ್ ತಂಡದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ತಪಾಸಣೆಯನ್ನು ನಡೆಸಲಾಗುತ್ತಿತ್ತು. 5 ಗಂಟೆಯ ಸಮಯಕ್ಕೆ ಟೋಲ್ ಪ್ಲಾಜಾದ ಬಳಿ ತಪಾಸಣೆ ನಡೆಸುತ್ತಿರುವಾಗ ಅಲ್ಲಿಗೆ ಬಂದ ಲಾರಿಯೊಂದರಲ್ಲಿದ್ದ ಉಗ್ರರು ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಇದರಿಂದಾಗಿ ಓರ್ವ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದೆ. ತಕ್ಷಣವೇ ಪೊಲೀಸರು ಉಗ್ರರ ಮೇಲೆ ಗುಂಡನ್ನು ಹಾರಿಸಿದ್ದಾರೆ. ಮೂರರಿಂದ ನಾಲ್ಕು ಉಗ್ರರು ಗಾಡಿಯಲ್ಲಿದ್ದಿರುವುದಾಗಿ ತಿಳಿದುಬಂದಿದ್ದು, ಸ್ಥಳದಲ್ಲೇ ಮೂವರು ಉಗ್ರರು ಮೃತ ಪಟ್ಟಿರುವುದಾಗಿ ಜಮ್ಮು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ. ಒಬ್ಬ ಉಗ್ರ ತಪ್ಪಿಸಿಕೊಂಡಿದ್ದು ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಗಾಡಿಯಲ್ಲಿ ನಾಲ್ಕು ಬಂದೂಕುಗಳಿದ್ದು ಅದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಒಂದು ಎಕೆ 47 ಹಾಗೂ ಅನೇಕ ಗ್ರೆನೇಡ್ಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದಿಲ್ಬಾಗ್ ಸಿಂಗ್ ನೀಡಿರುವ ಮಾಹಿತಿಯ ಪ್ರಕಾರ ಈ ಉಗ್ರರು ಅಕ್ರಮ ನುಸುಳುಕೋರರ ಗುಂಪಿಗೆ ಸೇರಿದವರಾಗಿದ್ದು, ಹರಿನಗರದಿಂದ ಶ್ರೀನಗರದತ್ತ ಪ್ರಯಣ ಬೆಳೆಸುತ್ತಿದ್ದರು ಎನ್ನಲಾಗಿದೆ.
ದಾಳಿಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಗಂಟೆಗಳ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. (ಏಜೆನ್ಸೀಸ್)