ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಿತಳಾದ ಯುವತಿಯ ಸ್ನೇಹ ಬೆಳೆಸಿ, ಆಕೆಯ ಜತೆ ಸುತ್ತಾಡಿ ಆಕೆಯ ಹನಿಟ್ರ್ಯಾಪ್ನಲ್ಲಿ ಸಿಲುಕಿದ ವೈದ್ಯನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಚಾಂದಿನಿ (22) ಆಕೆಯ ಲವರ್ ಪ್ರಜ್ವಲ್ (26) ಮತ್ತು ಅನಿರುದ್ಧ (23) ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆ ಏನು?: ಯಲಹಂಕ ಸಮೀಪದ ಪ್ರಕೃತಿನಗರ ನಿವಾಸಿ 40 ವರ್ಷದ ವೈದ್ಯರೊಬ್ಬರು ಹನಿಟ್ರ್ಯಾಪ್ನಲ್ಲಿ ಸಿಲುಕಿದ್ದರು. ವೈದ್ಯರಿಗೆ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಯುವತಿ ಚಾಂದಿನಿ ಪರಿಚಯವಾಗಿದ್ದಳು. ಪ್ರತಿನಿತ್ಯ ಚಾಟಿಂಗ್ ಮುಂದುವರಿಸಿದ್ದರು. ಇಬ್ಬರ ನಡುವಿನ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಬಳಿಕ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಜೂ.13ರಂದು ಬೆಳಗ್ಗೆ ಡಾಕ್ಟರ್ಗೆ ಕರೆ ಮಾಡಿದ್ದ ಚಾಂದಿನಿ, ‘ನನಗೆ ಬೇಸರವಾಗುತ್ತಿದೆ. ಹೊರಗಡೆ ಹೋಗೋಣ’ ಎಂದು ಪುಸಲಾಯಿಸಿದ್ದಳು. ಆಕೆಯ ಮಾತನ್ನು ನಂಬಿದ ವೈದ್ಯ, ಅದೇ ದಿನ ಸಂಜೆ ಏರ್ಪೋರ್ಟ್ ರಸ್ತೆಯಲ್ಲಿರುವ ಹೋಟೆಲ್ಗೆ ಕರೆದುಕೊಂಡು ಹೋಗಿದ್ದರು. ಅಲ್ಲೇ ಇಬ್ಬರೂ ಊಟ ಮಾಡಿದ್ದರು. ಇದನ್ನೂ ಓದಿ: ಹಳೆಯ ಕಾಲದ ಚೊಂಬೆಂದು ನಂಬಿಸಿ ಟ್ರಾವೆಲ್ಸ್ ಉದ್ಯಮಿಗೆ 2 ಕೋಟಿ ರೂ. ಚೊಂಬು!
ಅಂದೇ ರಾತ್ರಿ 11 ಗಂಟೆಯ ಸುಮಾರಿಗೆ ಯುವತಿಯನ್ನು ಯಲಹಂಕದ ಪ್ರಕೃತಿ ನಗರದ 9ನೇ ಕ್ರಾಸ್ನಲ್ಲಿರುವ ತಮ್ಮ ಮನೆಗೆ ಕರೆದೊಯ್ದಿದ್ದರು. ತಡರಾತ್ರಿ ಮನೆಗೆ ನುಗ್ಗಿದ ಇಬ್ಬರು ಯುವಕರು, ತಾವು ಇಂಟಲಿಜೆನ್ಸ್ ಪೊಲೀಸರು ಎಂದು ಪರಿಚಯಿಸಿಕೊಂಡರು. ಚಾಂದಿನಿ ಜತೆ ಸುತ್ತಾಡಿರುವ ಫೋಟೋ ಹಾಗೂ ಏಕಾಂತದಲ್ಲಿರುವ ಖಾಸಗಿ ದೃಶ್ಯಗಳನ್ನು ನಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದೇವೆ. 10 ಲಕ್ಷ ರೂ. ಕೊಡಬೇಕು. ಇಲ್ಲವಾದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಮಾನ ಕಳೆಯುತ್ತೇವೆ ಎಂದು ಹೆದರಿಸಿದರು.
ಇದಕ್ಕೆ ಡಾಕ್ಟರ್ ಜಗ್ಗದಿದ್ದಾಗ ಸ್ವತಃ ಯುವತಿಯೇ ಹೆದರಿಸಲು ಮುಂದಾದಳು. ‘‘ಪೊಲೀಸರು ಎಂದು ಹೇಳಿಕೊಂಡು ಬಂದ ಯುವಕರು ನನ್ನ ಕಡೆಯವರೇ. ಹಣ ಕೊಡದಿದ್ದರೆ ಜೀವ ಸಹಿತ ಬಿಡುವುದಿಲ್ಲ’’ ಎಂದು ಬೆದರಿಸಿದಳು. ತನ್ನ ಬಳಿ ಅಷ್ಟೊಂದು ಹಣವಿಲ್ಲ ಎಂದು ಡಾಕ್ಟರ್ ಹೇಳಿದಾಗ ಜೇಬಿನಲ್ಲಿದ್ದ 5000 ರೂ. ತೆಗೆದುಕೊಂಡರು. ‘‘ಮತ್ತೆ ನಿನಗೆ ಫೋನ್ ಮಾಡುತ್ತೇವೆ. ನಾವು ಸೂಚಿಸಿದ ಸ್ಥಳಕ್ಕೆ ಬಾಕಿ ಹಣವನ್ನು ತಂದು ಕೊಡಬೇಕು. ಇದರಲ್ಲಿ ಏನಾದ್ರೂ ಹೆಚ್ಚು ಕಮ್ಮಿಯಾದರೆ ಪೊಲೀಸರಿಗೆ ದೂರು ಕೊಡುತ್ತೇವೆ’’ ಎಂದು ಎಚ್ಚರಿಕೆ ನೀಡಿ ಹೊರಟು ಹೋದರು.
ಇದರಿಂದ ಹೆದರಿದ ಡಾಕ್ಟರ್ ಯಲಹಂಕ ಪೊಲೀಸರಿಗೆ ಜೂನ್ 14 ರಂದು ದೂರು ನೀಡಿದರು. ಹಣ ಪಡೆಯುವ ಉದ್ದೇಶದಿಂದ ಒಂದು ಗುಂಪು ನನಗೆ ಬೆದರಿಕೆ ಹಾಕಿ 15000 ಹಣ ಕಸಿದಿದ್ದಾರೆ. ನನಗೆ ನ್ಯಾಯ ಸಿಗಬೇಕು ಎಂದು ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಕೊಹ್ಲಿ, ಧೋನಿ, ರೋಹಿತ್ ಹುಡುಗಿಯರಾಗಿದ್ದರೆ ಹೇಗೆ ಕಾಣುತ್ತಿದ್ದರು ಗೊತ್ತೇ?
ಆರೋಪಿಗಳು ಬಲೆಗೆ ಬಿದ್ದಿದ್ದು ಹೇಗೆ?
ಈ ಮೊದಲೇ ಬ್ಲಾಕ್ಮೇಲ್ ಮಾಡಿದ್ದ ಪ್ರಜ್ವಲ್ ಡಾಕ್ಟರ್ ವಿರುದ್ಧವೇ ದೂರು ನೀಡಲು ಠಾಣೆಗೆ ಬಂದಿದ್ದ. ಈ ವೇಳೆ ಪೊಲೀಸರ ಬಳಿಯೇ ಅನುಚಿತವಾಗಿ ವರ್ತಿಸಿದ್ದ. ಎಫ್.ಐ.ಆರ್ ಬಳಿಕ ನೀವೇನು ಮಾಡ್ತೀರಿ ಎಂದು ಪೊಲೀಸರ ವಿರುದ್ಧವೇ ಹೆಚ್ಚುಗಾರಿಕೆ ತೋರಿದ್ದ. ಅನುಮಾನಗೊಂಡ ಪೊಲೀಸರು ಪ್ರಜ್ವಲ್ನನ್ನು ತೀವ್ರ ವಿಚಾರಣೆ ನಡೆಸಿದ್ದರು. ಪೊಲೀಸರು ತಮ್ಮ ಭಾಷೆಯಲ್ಲಿ ಮಾತನಾಡಿದಾಗ ಪ್ರಜ್ವಲ್ ಹನಿಟ್ರ್ಯಾಪ್ ವಿಷಯ ಬಾಯಿಬಿಟ್ಟಿದ್ದ. ಚಾಂದಿನಿಯನ್ನು ಮಾತನಾಡಿಸಿದಾಗ ಮೊದಲು ಒಂದು ಕೋಟಿಗೆ ಡಿಮ್ಯಾಂಡ್ ಮಾಡಿದ್ವಿ ನಂತರ ಹತ್ತು ಲಕ್ಷಕ್ಕೆ ಬೇಡಿಕೆ ಇಟ್ಟಿದ್ವಿ ಎಂದು ತಪ್ಪೊಪ್ಪಿಕೊಂಡಳು. ಸದ್ಯ ಹನಿಟ್ರಾಪ್ ಮಾಡಿದ್ದ ಶಿವಮೊಗ್ಗ ಜಿಲ್ಲೆ ಸಾಗರ ಮೂಲದ ಚಾಂದಿನಿ ಮತ್ತು ಅನಿರುದ್ಧ ಹಾಗೂ ಚಾಂದಿನಿ ಲವರ್ ಪ್ರಜ್ವಲ್ ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಇಂದು ನ್ಯಾಯಾಂಗ ಬಂದನಕ್ಕೆ ಒಪ್ಪಿದಲಾಗಿದೆ.
ಆನ್ಲೈನ್ ಗೆಳತಿ ಜತೆ ಸುತ್ತಾಡಿ ಹನಿಟ್ರ್ಯಾಪ್ನಲ್ಲಿ ಸಿಲುಕಿದ ಡಾಕ್ಟರ್!