More

    ಶ್ರೀಲಂಕಾದಲ್ಲಿ ಚಲನಚಿತ್ರ ಅಕಾಡೆಮಿ ಆರಂಭಿಸಲು ಚಿಂತನೆ

    ಭಾರತ ಸರ್ಕಾರದ ಸಹಕಾರದೊಂದಿಗೆ ಶ್ರೀಲಂಕಾದಲ್ಲಿ ಚಲನಚಿತ್ರ ಆಕಾಡೆಮಿ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಶ್ರೀಲಂಕಾದ ವಾರ್ತಾ ಮತ್ತು ಸಾರಿಗೆ ಸಚಿವ ಡಾ. ಬಂದುಲ ಗುಣವರ್ಧನೆ ತಿಳಿಸಿದರು.

    ಭಾರತೀಯ ಚಲನಚಿತ್ರಗಳ ಮೇಲೆ ಬೆಳಕು ಚೆಲ್ಲುವ ಸಲುವಾಗಿ ಪ್ರಥಮ ಬಾರಿಗೆ ಶ್ರೀಲಂಕಾದ ಕೊಲಂಬೋದಲ್ಲಿ ಆಯೋಜಿಸಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಕನ್ನಡ ಚಲನಚಿತ್ರೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

    ಭಾರತದ ಚಲನಚಿತ್ರ ಉದ್ಯಮಿಗಳ ಅಪಾರ ಅನುಭವವನ್ನು ಒಳಗೊಂಡಲ್ಲಿ ಈ ಚಲನಚಿತ್ರ ಅಕಾಡೆಮಿ ಸತ್ವಯುತವಾಗಲಿದೆ. ಶ್ರೀಲಂಕಾದ ಆರ್ಥಿಕ ಅಭಿವೃದ್ಧಿಗೆ ಚಲನಚಿತ್ರ ಉದ್ಯಮ ಮಹತ್ವದ ಸೇತುವೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

    ಉತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು, ಕನ್ನಡ ಚಲನಚಿತ್ರ ರಂಗವು ಈಗ ವಿಶ್ವವ್ಯಾಪಿ ಜನಪ್ರಿಯತೆ ಗಳಿಸಿದೆ. ಕನ್ನಡ ಚಲನಚಿತ್ರಗಳು ದೃಶ್ಯ ಮಾಧ್ಯಮದ ಮಹತ್ವವನ್ನು ಹೆಚ್ಚಿಸಿದೆ. ಕನ್ನಡ ಚಲನಚಿತ್ರಗಳ ಗುಣಮಟ್ಟ ಜಾಗತಿಕವಾಗಿ ಪ್ರಶಂಸೆಗೆ ಒಳಪಟ್ಟಿದೆ ಎಂದು ಹೇಳಿದರು.

    ಚಲನಚಿತ್ರ ನನ್ನ ಪಾಲಿಗೆ ಮನರಂಜನೆಯ ಜತೆಗೆ ಸಮಾಜದ ಬಿಕ್ಕಟ್ಟುಗಳನ್ನು ನೋಡುಗರ ಮುಂದಿಡುವ ಮಾಧ್ಯಮ. ನನ್ನ ಚಲನಚಿತ್ರಗಳು ನನ್ನ ಒಳತೋಟಿಗಳ ಜತೆಗೆ ಸಾಮಾಜಿಕ ಅರಿವು ಮೂಡಿಸಲು ಪ್ರಯತ್ನಿಸಿದೆ. ಶ್ರೀಲಂಕಾದ ಪ್ರಕೃತಿ ಸಿರಿ ಭಾರತದ ಚಿತ್ರ ಉದ್ಯಮವನ್ನು ಸೆಳೆಯುವಂತಿದೆ. ಉದ್ಯಮ ಇಲ್ಲಿನ ಚಲನಚಿತ್ರ ತಾಣಗಳನ್ನು ಬಳಸಿಕೊಳ್ಳಬೇಕು ಎಂದರು.

    ಚಿತ್ರನಟರಾದ ನಿರೂಪ್ ಭಂಡಾರಿ, ಕಾವ್ಯಾಶೆಟ್ಟಿ, ಚಲನಚಿತ್ರ ತಂತ್ರಜ್ಞ ಎಸ್.ಕೆ. ರಾವ್, ನಿರ್ಮಾಪಕ ಶಂಕರೇಗೌಡ, ಹಿರಿಯ ಪತ್ರಕರ್ತರಾದ ಜಿ.ಎನ್.ಮೋಹನ್, ಎಚ್.ಬಿ. ಮದನಗೌಡ ಮಾತನಾಡಿದರು.

    ಶ್ರೀಲಂಕಾದಲ್ಲಿನ ಭಾರತದ ರಾಯಭಾರಿ ಗೋಪಾಲ ಭಾಗ್ಲೆ, ಭಾರತದ ವಿವೇಕಾನಂದ ಸಾಂಸ್ಕೃತಿಕ ಸಂಸ್ಥೆ ನಿರ್ದೇಶಕ ಪ್ರೊ.ಅಂಕುರನ್ ದತ್ತ, ಶ್ರೀಲಂಕಾ ಚಲನಚಿತ್ರ ಮಂಡಳಿ ಅಧ್ಯಕ್ಷ ದೀಪಲ್ ಚಂದ್ರರತ್ನೆ, ಪ್ರವಾಸೋದ್ಯಮ ಪ್ರಚಾರ ಬ್ಯೂರೋದ ಉಪನಿರ್ದೇಶಕ ಚಮಿಂದ ಮುನಿಸಿಂಘೆ ಇದ್ದರು.

    ಶ್ರೀಲಂಕಾ ಪ್ರವಾಸೋದ್ಯಮ ಉತ್ತೇಜನ ಮಂಡಳಿ (ಎಸ್‌ಎಲ್ಟಿಪಿಬಿ), ಏಷಿಯಾ ಮಾಧ್ಯಮ ಮತ್ತು ಸಾಂಸ್ಕೃತಿಕ ಸಂಸ್ಥೆ (ಎಎಂಸಿಎ), ಶ್ರೀಲಂಕಾ ಚಲನಚಿತ್ರ ಮಂಡಳಿ(ಎನ್‌ಎಫ್‌ಸಿ ), ಭಾರತ ರಾಯಭಾರ ಕಚೇರಿ ಹಾಗೂ ವಿವೇಕಾನಂದ ಸಾಂಸ್ಕೃತಿಕ ಸಂಸ್ಥೆ (ಐಸಿಸಿಆರ್)ಯಿಂದ ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಚಿತ್ರೋತ್ಸವದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೆರಿಕ ಅಮೆರಿಕ, ಇಷ್ಟಕಾಮ್ಯ, ಮಾತಾಡ್ ಮಾತಾಡ್ ಮಲ್ಲಿಗೆ ಹಾಗೂ ಕೊಟ್ರೇಶಿ ಕನಸು ಚಲನಚಿತ್ರಗಳು ಪ್ರದರ್ಶನಗೊಂಡವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts