ಮುಂಬೈ: ದಕ್ಷಿಣ ಮುಂಬೈನ ಛತ್ರಶಿವಾಜಿ ಟರ್ಮಿನಸ್ ಬಳಿ ಇರುವ ಅಂಗಡಿಗಳಲ್ಲಿ ಬೆಣ್ಣೆ ಕದಿಯುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಪ್ರದೇಶದಲ್ಲಿ ಹೆಚ್ಚಾಗಿ ಪಾವ್ಭಾಜಿ ಮಾಡಲಾಗುತ್ತದೆ. ಅಲ್ಲಿ ಚೀಸ್ ಮತ್ತು ಬೆಣ್ಣೆಗಳನ್ನು ಸದಾ ಇಡಲಾಗುತ್ತದೆ. ಅಂಗಡಿ ಬಂದ್ ಆದ ಮೇಲೆ ಒಳಕ್ಕೆ ನುಗ್ಗಿ ಚೀಸ್ ಮತ್ತು ಬೆಣ್ಣೆಗಳನ್ನು ಕದಿಯುತ್ತಿದ್ದರು ಇಬ್ಬರು ಮಹಾಕಳ್ಳರು. ಇವರನ್ನು ಹೊಂಚುಹಾಕಿ ಇದೀಗ ಪೊಲೀಸರು ಹಿಡಿದಿದ್ದಾರೆ.
ಇದಾಗಲೇ 100ಕೆ.ಜಿಗೂ ಅಧಿಕ ಬೆಣ್ಣೆ ಕದ್ದಿರುವ ಬಗ್ಗೆ ಕೇಳಿರುವ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಬೆಣ್ಣೆ ಮತ್ತು ಚೀಸ್ಗಳನ್ನು ಕದಿಯುವುದು ಏಕೆ ಎಂದು ಪೊಲೀಸರು ಕೇಳಿದಾಗ ಈ ಖದೀಮರು ಏನೆಂದಿದ್ದಾರೆ ಗೊತ್ತಾ? ಲಾಕ್ಡೌನ್ ಹಿನ್ನೆಲೆಯಲ್ಲಿ ಎಲ್ಲಿಯೂ ಕೆಲಸವಿಲ್ಲ. ಆದ್ದರಿಂದ ಹಸಿವೆ ಆಗುತ್ತಿತ್ತು. ಬೆಣ್ಣೆ ಮತ್ತು ಚೀಸ್ ತಿನ್ನಲು ತುಂಬಾ ಚೆನ್ನಾಗಿರುತ್ತದೆ. ಅದರಿಂದ ಹಸಿವೆ ಹೋಗುತ್ತದೆ. ಅದೇ ಕಾರಣಕ್ಕೆ ಇದನ್ನಷ್ಟೇ ಕದಿಯುತ್ತಿದ್ದೇವೆ ಎಂದಿದ್ದಾರೆ!
ಇದನ್ನೂ ಓದಿ: ನನ್ನ ನೆಲದಲ್ಲಿ ಇನ್ನು ಯುದ್ಧದ ಮಾತೇ ಇಲ್ಲ ಎಂದ ಕಿಮ್ ಜಾಂಗ್!
ಈ ಕಳ್ಳರ ಕಿತಾಪತಿ ಇಷ್ಟಕ್ಕೇ ಮುಗಿದಿಲ್ಲ. ಬೆಣ್ಣೆ, ಚೀಸ್ಗಳ ಪಾತ್ರೆಗಳನ್ನೇ ಎತ್ತಿಹಾಕಿಕೊಂಡು ಹೋಗುತ್ತಿದ್ದ ಇವರು, ಬೆಣ್ಣೆ,ಚೀಸ್ ತಿಂದು ಪಾತ್ರೆಗಳನ್ನು ಮಾರಾಟ ಮಾಡಿ ಅದರಿಂದ ಹಣ ಸಂಗ್ರಹ ಮಾಡುತ್ತಿದ್ದರು. ಜನಪ್ರಿಯ ಉಪಾಹಾರ ಗೃಹವಾದ ಕ್ಯಾನನ್ ಪಾವ್ ಭಾಜಿ ಅಂಗಡಿಯೊಂದರಿಂದಲೇ ಇವರು ಅಪಾರ ಪ್ರಮಾಣದ ಬೆಣ್ಣೆ ಕದ್ದಿದ್ದಾರೆ.
ಇವರ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಅಂತೂ ಕಳ್ಳರನ್ನು ಹಿಡಿದಿದ್ದಾರೆ. ಇವರನ್ನು ಸಂತೋಷ್ ಥಾಪಾ (20) ಮತ್ತು ಕರಣ್ ಜಾಧವ್ (25) ಎಂದು ಗುರುತಿಸಲಾಗಿದೆ.
“ಆರೋಪಿಗಳು ಹತ್ತಿರ ಕೊಳೆಗೇರಿಯಲ್ಲಿ ವಾಸವಾಗಿದ್ದಾರೆ. ಜೀವನಕ್ಕಾಗಿ ಸ್ಕ್ರ್ಯಾಪ್ ಮಾರಾಟ ಮಾಡುತ್ತಿದ್ದಾರೆ. ಆದರೆ ಲಾಕ್ಡೌನ್ ಹಿನ್ನೆಲೆಯಲ್ಲಿ ಅವರಿಗೆ ಕೆಲಸ ಇಲ್ಲದಾಗಿದೆ. ಆಲ್ಲಿ ಇಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದ ಇವರಿಗೆ ಪಾವ್ಭಾಜಿ ಅಂಗಡಿಯಲ್ಲಿ ಇಟ್ಟಿರುವ ಘಮ್ ಘಮ್ ಎನ್ನುವ ಬೆಣ್ಣೆ ಮತ್ತು ಚೀಸ್ ಮೇಲೆ ಆಸೆ ಹುಟ್ಟಿ ಅದನ್ನೇ ಕದಿಯಲು ಶುರು ಮಾಡಿದ್ದಾರೆ.
ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. (ಏಜೆನ್ಸೀಸ್)