ಶಿವಮೊಗ್ಗ: ಅಲ್ಪಸಂಖ್ಯಾತರ ಅಭಿವೃದ್ಧಿಗೆಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹಣ ಕೊಟ್ಟರೆ ನಮ್ಮ ಅಭ್ಯಂತರವಿಲ್ಲ. ಆದರೆ ಅದನ್ನೇ 10 ಸಾವಿರ ಕೋಟಿ ರೂ. ಕೊಡುತ್ತೇವೆಂದು ದೊಡ್ಡದಾಗಿ ಬಿಂಬಿಸುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದರು.
ವಿನೋಬನಗರದ ಸ್ವಗೃಹದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಅಲ್ಪಸಂಖ್ಯಾತರ ಅಭಿವೃದ್ಧಿಗೆಂದು ಹಣ ನೀಡುವುದಾಗಿ ಸಿಎಂ ಹೇಳಿರುವುದು ಹಿಂದೂಗಳ ಆಕ್ರೋಶಕ್ಕೂ ಕಾರಣವಾಗಬಹುದು. ಈ ರೀತಿಯ ಮಾತುಗಳನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿದ್ಧರಾಮಯ್ಯ ಅವರಿಂದ ನಿರೀಕ್ಷೆ ಮಾಡಿರಲಿಲ್ಲ. ಸಿಎಂ ಹೇಳಿಕೆಯನ್ನು ಈಗಾಗಲೇ ಮಠಾಧಿಪತಿಗಳು ಸೇರಿ ಎಲ್ಲರೂ ಖಂಡಿಸಿದ್ದು ಈ ರೀತಿ ಓಲೈಕೆ ರಾಜಕಾರಣ ಸರಿಯಲ್ಲ ಎಂದರು.
ಮುಂಬರುವ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಲ್ಲೇ ಹೋಗುತ್ತೇವೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಅವರ ನೇತೃತ್ವದಲ್ಲಿ ರಾಜ್ಯ ಮತ್ತು ಇಡೀ ದೇಶದಲ್ಲೂ ಬಿಜೆಪಿ ಗೆಲ್ಲುತ್ತದೆ. ನರೇಂದ್ರ ಮೋದಿ ಅವರು ಗೆಲ್ಲುತ್ತಾರೆ ಎಂದರು.
ಬರ ಪರಿಹಾರಕ್ಕೆ ಕೇಂದ್ರದಿಂದ ಹಣ ಬರುತ್ತದೆ. ಅದಕ್ಕೆ ನಾವು ಸಹಕರಿಸುತ್ತೇವೆ. ಈಗಾಗಲೇ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ಕೇಂದ್ರಕ್ಕಾಗಿ ಕಾಯುವುದು ಸರಿಯಲ್ಲ. ತಕ್ಷಣ ಬರ ಕಾಮಗಾರಿ ಆರಂಭಿಸಬೇಕು. ರೈತರಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.
ಸಚಿವ ಪ್ರಿಯಾಂಕ ಖರ್ಗೆ ಬೆಳಗಾವಿ ವಿಧಾನಸಭೆಯಲ್ಲಿರುವ ಸಾವರ್ಕರ್ ೆಟೋ ತೆಗೆಯುವ ಹೇಳಿಕೆ ಖಂಡಿಸಿದ ಅವರು, ಇದು ಸರಿಯಾದ ಹೇಳಿಕೆ ಅಲ್ಲ. ಇದನ್ನು ರಾಜ್ಯದ ಜನತೆ ಎಂದಿಗೂ ಸಹಿಸುವುದಿಲ್ಲ. ಅಂತಹ ದುಸ್ಸಾಹಸಕ್ಕೆ ಸರ್ಕರ ಕೈಹಾಕಬಾರದು ಎಂದರು. ಮಾಜಿ ಸಚಿವ ವಿ.ಸೋಮಣ್ಣ ಅವರು ಎಲ್ಲೂ ಹೋಗುವುದಿಲ್ಲ. ಅವರು ನಮ್ಮೊಂದಿಗೆ ಇರುತ್ತಾರೆಂದು ಕಾಂಗ್ರೆಸ್ ಸೇರ್ಪಡೆಯಾಗುವ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.