ಶಿವಮೊಗ್ಗ: ನಗರದ ಹೊರವಲಯದ ಮಲವಗೊಪ್ಪದಲ್ಲಿ ಎದುರು ಮನೆಯ ಯುವಕನ ಮೇಲೆ ಬರೋಬ್ಬರಿ 15.83 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು ಮಾಡಿರುವ ಆರೋಪ ಕೇಳಿಬಂದಿದ್ದು ಪ್ರಕರಣ ತುಂಗಾನಗರ ಠಾಣೆ ಮೆಟ್ಟಿಲೇರಿದೆ.
ಮಲವಗೊಪ್ಪದ ನವೀನ್ಕುಮಾರ್ ನಾಯ್ಕ ಅವರ ಮನೆಯಲ್ಲಿ ಫೆ.8ರಂದು ಕಳ್ಳತನ ನಡೆದಿದೆ. ನವೀನ್ಕುಮಾರ್ ಅವರ ಮನೆಯಲ್ಲಿ ಸಂಬಂಧಿಕರು ಒಡೆವೆಗಳನ್ನು ಇಟ್ಟಿದ್ದರು. ಅವುಗಳನ್ನು ಬೆಡ್ರೂಮ್ನ ಬೀರುವಿನಲ್ಲಿಟ್ಟಿದ್ದರು. ಅವರ ಮನೆಗೆ ಎದುರು ಮನೆಯ ಯುವಕ ಆಗಾಗ್ಗೆ ಬಂದು ಹೋಗುತ್ತ ಆತ್ಮೀಯನಾಗಿದ್ದ. ಮನೆಗೆ ಬಂದು ಮಕ್ಕಳನ್ನಾಡಿಸುತ್ತಿದ್ದ. ಆತನಿಂದ ಸಣ್ಣಪುಟ್ಟ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಫೆ.8ರಂದು ಮನೆಗೆ ಬಂದಿದ್ದ ಆತ ಬೆಡ್ರೂಮ್ನಲ್ಲಿದ್ದ ಬೀರುವಿನಿಂದ ಏನನ್ನೋ ಕಳವು ಮಾಡಿದ್ದ. ಆತನನ್ನು ಪ್ರಶ್ನೆ ಮಾಡಿದಾಗ ಆತ ಪರಾರಿಯಾಗಿದ್ದ. ಬಳಿಕ ಬೀರು ಪರಿಶೀಲಿಸಿದಾಗ 286 ಗ್ರಾಂ ಚಿನ್ನಾಭರಣ ಮತ್ತು 10 ಸಾವಿರ ರೂ. ನಗದು ಕಳವು ಆಗಿರುವುದು ಗಮನಕ್ಕೆ ಬಂದಿದ್ದು ನವೀನ್ಕುಮಾರ್ ಅವರು ಯುವಕನ ಮೇಲೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.