ಶಿವಮೊಗ್ಗ: ಒಳ ಮೀಸಲಾತಿ ವಿರುದ್ಧದ ಹೋರಾಟಗಳು ಮುಂದುವರಿದಿದ್ದು ಗುರುವಾರ ಬೆಳಗ್ಗೆ ನಗರದ ಹೊರವಲಯ ಮಲವಗೊಪ್ಪದಲ್ಲಿ ಶಿವಮೊಗ್ಗ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂಜಾರ ಹಾಗೂ ಭೋವಿ ಸಮಾಜದವರು ಪ್ರತಿಭಟನೆ ನಡೆಸಿದರು. ಟಯರ್ಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಒಳ ಮೀಸಲಾತಿ ಕಲ್ಪಿಸುವ ಆದೇಶ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಹೆದ್ದಾರಿಯ ಮತ್ತೊಂದು ಬದಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗಲಿಲ್ಲ. ಸ್ಥಳದಲ್ಲಿ ಬಿಗಿ ಪೊಲೀಸ್ ಪಹರೆ ಮಾಡಲಾಗಿತ್ತು. ಪೊಲೀಸರ ಮನವೊಲಿಕೆಯ ನಂತರ, ಪ್ರತಿಭಟನಾಕಾರರು ಪ್ರತಿಭಟನೆ ಸ್ಥಗಿತಗೊಳಿಸಿದರು.
ಪ್ರತಿಭಟನೆಯಲ್ಲಿ ಭೋವಿ ಸಮಾಜದ ಮುಖಂಡ ಎಸ್.ಗಿರೀಶ್, ಬಂಜಾರ ಸಮುದಾಯದ ಮುಖಂಡರಾದ ರಾಮಾನಾಯ್ಕ್, ಮಂಜುನಾಥ ನಾಯ್ಕ್, ಎಲ್.ಅಭಿಷೇಕ್, ಜಗದೀಶ್ ನಾಯ್ಕ್, ನಾನ್ಯಾನಾಯ್ಕ್, ಸುರೇಶ್ ನಾಯ್ಕ್, ಅಣ್ಣಪ್ಪನಾಯ್ಕ್, ವಸಂತನಾಯ್ಕ್, ರಾಜನಾಯ್ಕ್, ಭೋಜ್ಯನಾಯ್ಕ್, ಧರ್ಮನಾಯ್ಕ್, ಮಂಜನಾಯ್ಕ್, ಆನಂದನಾಯ್ಕ್ ಮೊದಲಾದವರಿದ್ದರು.