ಬೆಂಗಳೂರು: ಖ್ಯಾತ ರಂಗಭೂಮಿ ಕಲಾವಿದೆ ಸುಭದ್ರಮ್ಮ ಮನ್ಸೂರ್ (81) ಬುಧವಾರ ಬಳ್ಳಾರಿಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ಧಾರೆ. ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಾಧಿತರಾಗಿದ್ದರು.
ಬಳ್ಳಾರಿಯ ರೇಡಿಯೋ ಪಾರ್ಕ್ ಪ್ರದೇಶದಲ್ಲಿರುವ ಮನೆಯಲ್ಲಿ ರಾತ್ರಿ 11.30ರಲ್ಲಿ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ತಕ್ಷಣವೇ ಅವರನ್ನು ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: 10 ವರ್ಷದ ಬಾಲಕ 30 ಸೆಕೆಂಡ್ಗಳಲ್ಲಿ ಎಗರಿಸಿದ್ದು ಎಷ್ಟು ಲಕ್ಷ ರೂ. ಗೊತ್ತಾ?
ಹಲವು ವರ್ಷಗಳ ಹಿಂದೆ ಇವರ ಪತಿ ಲಿಂಗರಾಜ ಮನ್ಸೂರ್ ನಿಧನರಾಗಿದ್ದರು. ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಇವರು ಅಗಲಿದ್ದಾರೆ.
ಪ್ರಶಸ್ತಿಗಳು ಹಲವು: ಸುದೀರ್ಘ ಕಾಲ ರಂಗಭೂಮಿ ಸೇವೆ ಸಲ್ಲಿಸಿದ್ದ ಸುಭದ್ರಮ್ಮ ಮನ್ಸೂರ್ ಅವರನ್ನು ಹುಡುಕಿಕೊಂಡು ಹಲವು ಪ್ರಶಸ್ತಿಗಳು ಒಲಿದು ಬಂದಿದ್ದವು. ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿ ಇನ್ನೂ ಹಲವು ಪ್ರಶಸ್ತಿಗಳಲ್ಲದೆ, ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಅನ್ನೂ ಪಡೆದುಕೊಂಡಿದ್ದರು.