ಶಿರಸಿ: ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಶಿರಸಿ ಜನತೆಗೆ ಸೋಮವಾರ ಸುರಿದ ಅಬ್ಬರದ ಮಳೆ ತಂಪೆರೆದಿದೆ.
ಸಂಜೆ 4.30ರ ಸುಮಾರಿಗೆ ಆರಂಭವಾದ ಮಳೆ, ಒಂದು ತಾಸಿಗೂ ಹೆಚ್ಚು ಕಾಲ ಸುರಿಯಿತು. ಏಕಾಏಕಿ ಹದವಾದ ಮಳೆ ಸುರಿದ ಕಾರಣ ಶಾಲೆ ವಿದ್ಯಾರ್ಥಿಗಳು ಮನೆಗೆ ತೆರಳಲು ಸಮಸ್ಯೆ ಎದುರಿಸಿದರು. ನಗರದ ಚರಂಡಿಗಳು ಉಕ್ಕಿ ರಸ್ತೆ ಮೇಲೆ ಕೆಲಕಾಲ ನೀರು ಹರಿದ ಕಾರಣ ವಾಹನ ಸವಾರರು ಪರದಾಡಿದರು.
ಶುಂಠಿಗೆ ಕಂಟಕ: ತಾಲೂಕಿನಲ್ಲಿ 500 ಹೆಕ್ಟೇರ್ಗೂ ಹೆಚ್ಚಿನ ಪ್ರದೇಶದಲ್ಲಿ ಶುಂಠಿ ಕೃಷಿ ಮಾಡಲಾಗಿದ್ದು, ಕಳೆದ 1 ತಿಂಗಳಿನಿಂದ ಕೀಳುವ ಪ್ರಕ್ರಿಯೆ ನಡೆಯುತ್ತಿದೆ. ಮಳೆಯಿಂದಾಗಿ ಬಹುತೇಕ ಶುಂಠಿ ಸಂಪೂರ್ಣ ನೆನೆದಿದೆ. ಹೀಗಾಗಿ ಕಿತ್ತ ಶುಂಠಿ ಕೂಡ ಬಳಕೆಗೆ ಬಾರದಂತಾಗುವ ಆತಂಕ ಬೆಳೆಗಾರರದ್ದಾಗಿದೆ.
ಅಡಕೆಗೆ ಆಪತ್ತು: ಭಾಗಶಃ ಚಾಲಿ ಅಡಕೆ ಸುರಕ್ಷಿತವಾಗಿ ಮನೆಯೊಳಗೆ ಸೇರಿದರೂ ಕೂಡ ಶೇ. 25ರಷ್ಟು ಚಾಲಿ ಅಡಕೆ ಇನ್ನೂ ಒಣಗುವ ಹಂತದಲ್ಲಿದೆ. ಮಳೆಯಿಂದಾಗಿ ಈ ಅಡಕೆಗೆ ಫಂಗಸ್ ಹರಡುವ ಭಯ ರೈತರನ್ನು ಕಾಡುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಯಲ್ಲಾಪುರ, ಹಳಿಯಾಳ ಭಾಗದಲ್ಲೂ ಹದ ಮಳೆ ಸುರಿದಿದೆ. ಭಾನುವಾರ ಸಂಜೆ ಬೀಸಿದ ಭಾರಿ ಗಾಳಿಗೆ ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾ.ಪಂ. ಬಸನಾಳ ಗ್ರಾಮದ ಬಮ್ಮು ಎಡಗೆ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.