More

    ಪಿತೃ ಪ್ರಧಾನ ವ್ಯವಸ್ಥೆ ಪ್ರಜಾಪ್ರಭುತ್ವದ ಅಣಕ; ಪ್ರೊ.ಎನ್. ಮಣಿಮೇಕಲೈ ವಿಷಾದ

    ವಿಜಯಪುರ: ನಮ್ಮ ಸಮಾಜದಲ್ಲಿ ಪಿತೃಪ್ರಧಾನ ವ್ಯವಸ್ಥೆ ಎಲ್ಲಾ ರಂಗಗಳಲ್ಲಿಯೂ ಇದ್ದು ಮಹಿಳೆಯರ ದುಡಿಮೆಯನ್ನು ದುಡಿಮೆಯಾಗಿ ಪರಿಗಣಿಸುತ್ತಿಲ್ಲ. ಕೇವಲ ಕೆಲವೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನೀತಿ ನಿರ್ಧಾರಗಳನ್ನು ಕೈಗೊಳ್ಳುವ ವ್ಯವಸ್ಥೆ ಇದೆ. ಇದು ಪ್ರಜಾಪ್ರಭುತ್ವದ ಅಣಕ ಎಂದು ನವದೆಹಲಿಯ ಮಹಿಳಾ ಅಭಿವೃದ್ಧಿ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಎನ್. ಮಣಿಮೇಕಲೈ ವಿಷಾದ ವ್ಯಕ್ತಪಡಿಸಿದರು.

    ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರ, ಸಮಾಜಶಾಸ್ತ್ರ ವಿಭಾಗ, ಅರ್ಥಶಾಸ್ತ್ರ ಮತ್ತು ಸಮಾಜಕಾರ್ಯ ವಿಭಾಗಗಳ ಸಹಯೋಗದಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ‘ಉದಾರೀಕರಣದ ಸಂದರ್ಭದಲ್ಲಿ ಮಹಿಳಾ ಅಭಿವೃದ್ಧಿ’ ಎಂಬ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

    ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನಿರಾಕರಿಸಲಾಗುತ್ತಿದ್ದು ಲಿಂಗ ಅಸಮಾನತೆಯ ದೊಡ್ಡ ಕಂದರ ಹಾಗೇ ಉಳಿದುಕೊಂಡು ಬರುತ್ತಿದೆ. ಈ ಲಿಂಗ ಅಸಮಾನತೆ ಮತ್ತು ಮಹಿಳೆಯರ ವಿಷಯಗಳನ್ನು ಮುನ್ನೆಲೆಗೆ ತಂದ ಶ್ರೇಯಸ್ಸು ಮಾರಿಯಾ ಮೈಸ್ ಅವರಿಗೆ ಸಲ್ಲುತ್ತದೆ ಎಂದರು.

    ಜಾಗತೀಕರಣದ ಇವತ್ತಿನ ಸಂದರ್ಭದಲ್ಲಿ ಆರ್ಥಿಕ ಬದಲಾವಣೆಯು ಮಹಿಳೆಯರ ಜೀವನದಲ್ಲಿ ಹೆಚ್ಚು ಹೆಚ್ಚು ಪ್ರಭಾವ ಬೀರುತ್ತದೆ. ಸಮಾಜದಲ್ಲಿ ಬಹುತೇಕ ಮಹಿಳೆಯರು ಮನೆ ಕೆಲಸ, ವ್ಯಾಪಾರ ಮತ್ತು ಕೃಷಿಗಳಂತಹ ಅಸಂಘಟಿತ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅವರ ಈ ದುಡಿಮೆಗೆ ಸಾಮಾಜಿಕ ಮಾನ್ಯತೆಯೇ ಇಲ್ಲ. ಮಹಿಳೆಯರ ಕೆಲಸಗಳನ್ನು ದುಡಿಮೆ ಎಂದು ಇವತ್ತಿಗೂ ಪರಿಗಣಿಸದೇ ಇರುವುದು ಅತ್ಯಂತ ಖೇದದ ಸಂಗತಿ ಎಂದು ಅವರು ಹೇಳಿದರು.

    ಮಹಿಳೆಯರು ಇತ್ತೀಚಿನ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸುವುದರ ಮೂಲಕ ಉದಾರೀಕರಣದತ್ತ ಮುಖ ಮಾಡುವಂತಾಗಿದೆ. ಶಿಕ್ಷಣ, ಉದ್ಯೋಗಗಳಿಗೆ ಸಂಬಂಧಪಟ್ಟ ತೊಡಕುಗಳನ್ನು ಮಹಿಳೆಯರು ಎದುರಿಸುವುದು ಸಾಮಾನ್ಯ. ಆದರೆ ಅಂತಹ ಕಷ್ಟಗಳತ್ತ ಗಮನಹರಿಸದೆ ಬದಲಾವಣೆಯ ಹಾದಿಯತ್ತ ಸಾಗಬೇಕಿದೆ ಎಂದರು.

    ಉನ್ನತ ಶಿಕ್ಷಣ ಕ್ಷೇತ್ರದ ಸಂಸ್ಥೆಗಳಲ್ಲಿ ಮಹಿಳೆಯರು ಕೇವಲ ಶೇ.30ರಷ್ಟು ಸಂಖ್ಯೆಯಲ್ಲಿದ್ದಾರೆ. ಉಳಿದ ಶೇ.70ರಷ್ಟು ಮಹಿಳೆಯರು, ಅರೆಕಾಲಿಕ ಇಲ್ಲವೇ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಮಹಿಳೆಯರ ಸ್ಥಿತಿಗತಿ ಅರ್ಥವಾಗುತ್ತದೆ ಎಂದರು.
    ಮಹಿಳಾ ವಿವಿಯ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಮಹಿಳಾ ಅಧ್ಯಯನವನ್ನು ಒಂದು ವಿಷಯ ಕಡ್ಡಾಯವಾಗಿ ಓದುವಂತೆ ಕ್ರಮ ಕೈಗೊಳ್ಳಬೇಕು ಎಂದರು.

    ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲ ಅಧ್ಯಕ್ಷತೆ ವಹಿಸಿದ್ದರು. ಧಾರವಾಡದ ಆದಿತ್ಯ ಫೌಂಡೇಷನ್‌ನ ಅಧ್ಯಕ್ಷೆ ಶಾರದಾ ಪಾಟೀಲ, ಬೆಂಗಳೂರಿನ ಚಲನಚಿತ್ರ ನಿರ್ಮಾಪಕಿ ಡಾ.ಸಂಜ್ಯೋತಿ ವಿ.ಕೆ, ವಿವಿಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಆರ್.ವಿ. ಗಂಗಶೆಟ್ಟಿ, ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ.ಶಾಂತಾದೇವಿ.ಟಿ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಪಿ. ಬಳಿಗಾರ, ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ರಮೇಶ ಸೋನಕಾಂಬಳೆ, ಜಿಪಂ ಮಾಜಿ ಅಧ್ಯಕ್ಷೆ ಸುಮನ ಕೋಲಾರ ಮತ್ತಿತರರಿದ್ದರು.

    ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಲಕ್ಷ್ಮಿದೇವಿ ವೈ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹಿಳಾ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಭಾಗ್ಯಶ್ರೀ ದೊಡಮನಿ ಅತಿಥಿಗಳನ್ನು ಪರಿಚಯಿಸಿದರು. ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸುರೇಶ ಕೆ.ಪಿ. ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಅತಿಥಿ ಪ್ರಾಧ್ಯಾಪಕಿ ಡಾ. ಕೀರ್ತಿ ಹೊನವಾಡ ವಂದಿಸಿದರು. ಸಂಶೋಧನಾ ವಿದ್ಯಾರ್ಥಿನಿ ಗಿರಿಜಾ ನಾವಳ್ಳಿಮಠ ನಿರೂಪಿಸಿದರು.
    ಮಾರಿಯಾ ಮೈಸ್ ಅವರ ಉದಾರೀರಣದ ಸಂದರ್ಭದಲ್ಲಿ ಮಹಿಳಾ ಅಭಿವೃದ್ಧಿ ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts