ಕುಶಾಲನಗರ: ಸೂರು ಎನ್ನುವುದು ಎಲ್ಲರ ಜೀವನದಲ್ಲಿ ದೊಡ್ಡ ಕನಸಾಗಿದ್ದು, ವಿವಿಧ ಯೋಜನೆಯಡಿ ಫಲಾನುಭವಿಗಳು ಹಕ್ಕುಪತ್ರ ಪಡೆದು ಕೊಳ್ಳಲು ಅವಕಾಶವಿದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್ಗೌಡ ಹೇಳಿದರು.
ಕುಶಾಲನಗರ ತಾಲೂಕು ಆಡಳಿತ ವತಿಯಿಂದ ಸೋಮವಾರ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಮನೆ-ನಿವೇಶನ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಯಾವುದೇ ಇರಲಿ ಫಲಾನುಭವಿಗಳಿಗೆ ಸೌಲಭ್ಯ ನೀಡಲು ರಾಜಕೀಯ ಮಾಡಬಾರದು. ಚುನಾವಣಾ ಸಂದರ್ಭದಲ್ಲಿ ಸವಲತ್ತುಗಳನ್ನು ವಿತರಿಸಿ ಮತ ಕೇಳುವ ಪರಿಪಾಠ ನಿಲ್ಲಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಫಲಾನುಭವಿಗಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳುವುದು ಮಾತ್ರವಲ್ಲದೆ ಸದ್ಬಳಕೆಗೆ ಮುಂದಾಗಬೇಕಿದೆ. ಆದಷ್ಟು ಬೇಗ ಸೂರು ನಿರ್ಮಿಸಿಕೊಳ್ಳಬೇಕಿದೆ ಎಂದರು.
ತಹಸೀಲ್ದಾರ್ ಕಿರಣ್ ಗೌರಯ್ಯ ಮಾತನಾಡಿದರು. ಹಕ್ಕುಪತ್ರ ಸೇರಿದಂತೆ ಹಾಡಿ ನಿವಾಸಿಗಳಿಗೆ ಜಾತಿ ಪ್ರಮಾಣ ಪತ್ರ ಹಾಗೂ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ ಮಹಿಳೆಯರಿಗೆ ಕೊಡಮಾಡುವ ಟೈಲರಿಂಗ್ ಮಿಷನ್ಗಳನ್ನು ವಿತರಣೆ ಮಾಡಲಾಯಿತು.
ಅಕ್ರಮ- ಸಕ್ರಮ ಸಮಿತಿ ಅಧ್ಯಕ್ಷ ಗೋವಿಂದಪ್ಪ, ಸದಸ್ಯ ಸಂಜೀವಯ್ಯ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಮಹಾದೇವಿ, ಕಾಂಗ್ರೆಸ್ ಮುಖಂಡರಾದ ಪ್ರಮೋದ್ ಮುತ್ತಪ್ಪ, ಮಂಜುನಾಥ್ ಗುಂಡೂರಾವ್, ಜೋಸೆಫ್ ವಿಕ್ಟರ್ ಸೋನ್ಸ್, ನಟೇಶ್ ಗೌಡ, ಜಿಪಂ ಮಾಜಿ ಸದಸ್ಯೆ ಸುನೀತಾ, ಲ್ಯಾಂಪ್ಸ್ ಅಧ್ಯಕ್ಷ ಅರುಣ್ ರಾವ್, ಹೆಬ್ಬಾಲೆ ಶೇಖರ್, ತೊರೆನೂರು ಕೃಷ್ಣೇಗೌಡ, ಟಿ.ಡಿ.ಸೋಮಣ್ಣ ಮತ್ತಿತರರು ಹಾಜರಿದ್ದರು.