ಲಾಕ್ಡೌನ್ ಅವಧಿ ಪ್ರಕೃತಿಯಲ್ಲಿ ಮಾನವನ ಹಸ್ತಕ್ಷೇಪವನ್ನು ಕಡಿಮೆಗೊಳಿಸಿದೆ. ಹೀಗಾಗಿ ಪ್ರಾಣಿ, ಪಕ್ಷಿ, ಸರೀಸೃಪಗಳೂ ಸ್ವಚ್ಛಂದವಾಗಿ ವಿಹರಿಸುತ್ತಿವೆ. ಕಾಡು ಬಿಟ್ಟು ನಾಡಿನಲ್ಲಿ ಸಂಚರಿಸುತ್ತಿವೆ.
ಅಂತೆಯೇ ನಿರ್ಜನ ಪ್ರದೇಶಗಳಲ್ಲಿ ಹಾವುಗಳ ಓಡಾಟವೂ ಅಧಿಕವಾಗಿರುವುದು ಕಂಡುಬರುತ್ತಿದೆ. ಮನೆ, ಸುತ್ತಮುತ್ತ ಆವರಣಗಳಲ್ಲಿ ಉರಗಗಳು ಕಾಣಿಸಿಕೊಳ್ಳುತ್ತಿವೆ.
ಹೀಗೆಯೇ ಕಾಳಿಂಗ ಸರ್ಪವೊಂದು ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಬಿಸಿಲಿನ ಬೇಗೆಗೆ ಬಳಲಿದ್ದ ಅದಕ್ಕೆ ಯುವಕನೊಬ್ಬ ಪ್ರೀತಿಯಿಂದ ತಲೆಗೆ ತಣ್ಣೀರೆರೆದಿದ್ದಾನೆ. ಹೆಡೆ ಎತ್ತಿದ ಕಾಳಿಂಗ ಸರ್ಪದ ದೃಶ್ಯವಂತೂ ಭಯ ಹುಟ್ಟಿಸುವಂತಿದೆ. ಆದರೆ ಆ ಯುವಕ ಸಸಿಗಳಿಗೆ ನೀರುಣಿಸುವಷ್ಟೇ ಸುಲಭವಾಗಿ, ನಿರ್ಭಯವಾಗಿ ಸರ್ಪದ ಹೆಡೆಗೆ ಬಕೆಟ್ನಿಂದ ನೀರೆರೆದಿದ್ದಾನೆ. ಜತೆಗೆ ಸರ್ಪದ ತಲೆ ಮೇಲೆ ಮುಟ್ಟಿ ಮಾತನಾಡಿಸುತ್ತಿರುವಂತೆಯೇ ಕಾಣುತ್ತಾನೆ. ಇದು ನಿಜವೇ ಎಂಬ ಪ್ರಶ್ನೆ ಒಮ್ಮೆ ನಿಮ್ಮ ತಲೆಯಲ್ಲಿ ಬರದಿದ್ದರೆ ಕೇಳಿ.
Summer time..
And who doesn’t like a nice head bath🙏Can be dangerous. Please don’t try. pic.twitter.com/ACJpJCPCUq
— Susanta Nanda IFS (@susantananda3) May 24, 2020
ಈ ಯುವಕ ಕಾಳಿಂಗ ಸರ್ಪಕ್ಕೆ ಸ್ನಾನ ಮಾಡಿಸುತ್ತಿರುವ ದೃಶ್ಯದ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾಧಿಕಾರಿ ಸುಸಂತ ನಂದಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ ‘ಹಿತವಾದ ತಲೆಸ್ನಾನ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ಆದರೆ ಈ ರೀತಿ ಅಪಾಯಕಾರಿ ವನ್ಯಜೀವಿಗಳೊಂದಿಗೆ ಸಲಿಗೆ, ಆಟ ಒಳ್ಳೆಯದಲ್ಲ. ನೀವು ಹೀಗೆ ಮಾಡುವುದನ್ನು ಪ್ರಯತ್ನಿಸಬೇಡಿ ಎಂದು ಬರೆದಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದೆ. ಯುವಕನ ಉರಗ ಪ್ರೇಮ ಮೆಚ್ಚುವಂಥದ್ದೇ ಆದರೆ, ಅಪಾಯಕಾರಿ. ಆತ ಹಾವು ಹಿಡಿಯುವುದರಲ್ಲಿ ಪರಿಣತನಿರಬಹುದು. ಆದರೂ ಒಂದು ಕ್ಷಣ ಅಜಾಗರೂಕನಾದರೂ ಅಪಾಯ ಕಟ್ಟಿಟ್ಟ ಬುತ್ತಿ. ಕಾರಣ ವನ್ಯಜೀವಿಗಳೆಲ್ಲಿಯಾದರೂ ಕಂಡುಬಂದರೆ ಅವುಗಳನ್ನು ಹಿಡಿಯಲು ಅಥವಾ ಚೆಲ್ಲಾಟವಾಡಲು ಅಥವಾ ಸಲುಗೆಯಿಂದ ವರ್ತಿಸಲು ಪ್ರಯತ್ನಿಸದೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ ಅವುಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಗುತ್ತದೆ ಎಂದು ತಿಳಿಸಿದ್ದಾರೆ.