ನವದೆಹಲಿ: ಜಾಗತಿಕ ಸಾಂಕ್ರಾಮಿಕವೆನಿಸಿಕೊಂಡ ಕರೊನಾ ವೈರಸ್ ತುರ್ತು ಪರಿಸ್ಥಿತಿಯನ್ನು ತಂದೊಡ್ಡಿದೆ. ಜಾಗತಿಕವಾಗಿಯೇ ಆರ್ಥಿಕತೆ ಕುಸಿಯುತ್ತಿದೆ. ಅದಕ್ಕೆ ಭಾರತವೂ ಹೊರತಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲೆಡೆ ಲಾಕ್ಡೌನ್ ಆಗಿದೆ. ಮನೆಯಿಂದ ಹೊರಬರಬೇಡಿ ಎಂದು ಸರ್ಕಾರಗಳೇ ಹೇಳುತ್ತಿವೆ.
ಈ ಮಧ್ಯೆ 2018-19ನೇ ಆರ್ಥಿಕ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ದಿನಾಂಕವನ್ನು 2020ರ ಜೂನ್ 30ರವರೆಗೆ ವಿಸ್ತರಿಸಲಾಗಿದೆ.
ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ತೆರಿಗೆ ರಿಟರ್ನ್ಸ್ ಅವಧಿಗೆ ಮಾ.31 ಕೊನೇ ದಿನವಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದನ್ನು ವಿಸ್ತರಣೆ ಮಾಡುವುದು ಅಗತ್ಯ ಎಂದು ಹೇಳಿದ್ದಾರೆ.
ಹಾಗೇ ಆದಾಯ ತೆರಿಗೆ ರಿಟರ್ನ್ಸ್ ವಿಳಂಬದ ಮೇಲಿನ ಬಡ್ಡಿಯನ್ನು ಶೇ.12ರಿಂದ 9ಕ್ಕೆ ಕಡಿತಗೊಳಿಸಲಾಗಿದೆ. ಅಲ್ಲದೆ, ಪಾನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡುವ ದಿನಾಂಕವನ್ನು ಕೂಡ 2020ರ ಜೂನ್ 30ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗ ಕರೊನಾ ವೈರಸ್ ಎದುರಿಸಲು ಅಗತ್ಯ ಆರ್ಥಿಕ ಪ್ಯಾಕೇಜ್ನ್ನು ಕೇಂದ್ರ ಸರ್ಕಾರ ಶೀಘ್ರವೇ ಘೋಷಿಸಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅಲ್ಲದೆ, ಟಿಡಿಎಸ್ ಠೇವಣಿ ವಿಳಂಬಕ್ಕಾಗಿ ಶೇ.18ರ ಬದಲು, ಶೇ.9 ರಷ್ಟು ಬಡ್ಡಿ ವಿಧಿಸಲಾಗುವುದು ಎಂದಿದ್ದಾರೆ. (ಏಜೆನ್ಸೀಸ್)