More

    ನಡೆದಾಡುವ ದೇವರು ಮೆಚ್ಚಿದ ನಾಯಕ

    ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಲಿಂ. ಸಿದ್ದೇಶ್ವರ ಸ್ವಾಮೀಜಿಗಳು ಮೆಚ್ಚಿ, ಅಂತಃಕರಣದಿಂದ ಕೊಂಡಾಡಿದ ಅಗ್ರಗಣ್ಯ ನಾಯಕರೆಂದರೆ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಬಿಟ್ಟರೆ ಸಚಿವ ಎಂ.ಬಿ. ಪಾಟೀಲರು ಮಾತ್ರ.

    ಹಾಗೆ ನೋಡಿದರೆ ಪ್ರಧಾನಿ ನರೇಂದ್ರ ಮೋದಿ ಅವರಿಗಿಂತಲೂ ಮೊದಲೇ ಸಿದ್ಧೇಶ್ವರ ಶ್ರೀಗಳಿಂದ ಆಶೀರ್ವಾದ ರೂಪದ ಮೆಚ್ಚುಗೆ ಪಡೆದ ನಾಯಕ ಎಂ.ಬಿ. ಪಾಟೀಲ. ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ 2022 ಜೂ.21 ರಂದು ನಡೆದ ಕಾರ್ಯಕ್ರಮದಲ್ಲಿ ಪೂಜ್ಯ ಸಿದ್ಧೇಶ್ವರ ಶ್ರೀಗಳು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಕೊಂಡಾಡುವುದಕ್ಕೂ ಮುಂಚೆಯೇ ಎಂ.ಬಿ. ಪಾಟೀಲರನ್ನು ಜಲ ನಾಯಕ, ನೀರಿನ ನಾಯಕ, ನೀರು ಎಂದರೆ ಎಂ.ಬಿ. ಪಾಟೀಲ ಮತ್ತು ಎಂ.ಬಿ. ಪಾಟೀಲರೆಂದರೆ ನೀರು ಎಂದೆಲ್ಲಾ ಕೊಂಡಾಡಿದ್ದು ಎಂ.ಬಿ. ಪಾಟೀಲರ ಕಾರ್ಯಾವೈಖರಿ ಮತ್ತು ಜನಪರ ಕಾಳಜಿಗೆ ಸಿಕ್ಕ ಬಹುಮಾನ ಎಂದರೆ ಅತಿಶಯೋಕ್ತಿಯಲ್ಲ.

    MB Patil 4 (1)

    ‘ಜಗತ್ತಿನಲ್ಲಿ ನೀರು ಕೊಡುವ ದೊಡ್ಡ ಕಾರ್ಯದ ಎದುರು ಬೇರೆ ಯಾವ ಧರ್ಮವೂ ಇಲ್ಲ. ನೀರು ಕೊಟ್ಟರೆ ಅನ್ನ, ನೀರು ಕೊಟ್ಟರೆ ಪ್ರಾಣ. ಎಲ್ಲೆಡೆ ಇಂಥ ನೀರನ್ನು ಹಿಡಿದಿಡುವ ಕಾರ್ಯ ಎಂ.ಬಿ. ಪಾಟೀಲ ಮಾಡಿದ್ದಾರೆ. ಇವರು ಸಾಮಾನ್ಯ ನಾಯಕರಲ್ಲ, ಜಲನಾಯಕರು. ಜಲ ಇರುವವರೆಗೂ ಅವರು ನಾಯಕರೇ. ರಾಜ್ಯದ ಸಚಿವರಾದರೆ ಒಮ್ಮೆ ಇಳಿಯಬಹುದು ಮತ್ತೊಮ್ಮೆ ಏರಬಹುದು. ಆದರೆ, ಜಲದ ಸಚಿವರಾದರೆ ಜಲ ಇರುವವರೆಗೂ ಅವರು ಸಚಿವರೇ. ಹೀಗಾಗಿ ಎಂ.ಬಿ. ಪಾಟೀಲ ನೀರಿನ ನಾಯಕರು’ ಎಂದು ಪೂಜ್ಯ ಸಿದ್ಧೇಶ್ವರ ಶ್ರೀಗಳು ಹೇಳುತ್ತಲೇ ಇದ್ದರು.

    ‘ನೀರಾವರಿಗಾಗಿ ಎಂ.ಬಿ. ಪಾಟೀಲರು ಬಹಳ ದೊಡ್ಡ ಕೆಲಸ ಮಾಡಿದ್ದಾರೆ. ಅವರಿಗೆ ಇನ್ನೂ ಸಾಕಷ್ಟು ಕೆಲಸ ಮಾಡುವ ಹಂಬಲ ಇದೆ. ಎಲ್ಲೆಡೆ ನೀರು ಹರಿಸಿ ಹಿಡಿದಿಟ್ಟಿರುವ ಅವರು ನಿಜಕ್ಕೂ ಜಲದ ನಾಯಕರು. ಉಳಿದ ನಾಯಕರನ್ನು ಜನ ಇಳಿಸುತ್ತಾರೆ, ಮತ್ತೊಮ್ಮೆ ಏರಿಸುತ್ತಾರೆ. ಜಲದ ನಾಯಕರನ್ನು ಯಾರೂ ಇಳಿಸೋದಿಲ್ಲ, ಏರಿಸೋದಿಲ್ಲ. ನೀರು ಎಲ್ಲಿವರೆಗೆ ಇರುತ್ತದೋ ಅಲ್ಲಿಯವರೆಗೆ ಅವರು ಸಚಿವರೇ. ಜನರು ನೀರು ಕುಡಿಯುತ್ತಿರುವವರೆಗೆ ಅವರು ನಾಯಕರೆ. ಅವರು ನೀರಿನ ಸಚಿವರು. ನೀರು ಎಂದರೆ ಎಂ.ಬಿ. ಪಾಟೀಲ ಮತ್ತು ಎಂ.ಬಿ. ಪಾಟೀಲರೆಂದರೆ ನೀರು’ ಎಂದು ನೀರಾವರಿ ವಿಚಾರಕ್ಕೆ ಸಂಬಂಧಿಸಿದ ಮಾತುಗಳು ಬಂದಾಗಲೆಲ್ಲಾ ಲಿಂ. ಸಿದ್ಧೇಶ್ವರ ಶ್ರೀಗಳು ಪುನರುಚ್ಛರಿಸುತ್ತಿದ್ದರು.

    MB Patil 3 (1)

    ಪೂಜ್ಯ ಸಿದ್ಧೇಶ್ವರ ಶ್ರೀಗಳು ಸಾಮಾನ್ಯವಾಗಿ ಯಾವುದೇ ವ್ಯಕ್ತಿ ಆಧಾರಿತ ನುಡಿಗಳಾಡಿದ್ದು ಕಡಿಮೆ. ಅಂಥದರಲ್ಲಿ ಎಂ.ಬಿ. ಪಾಟೀಲರನ್ನು ಮನಃಪೂರ್ವಕ ಕೊಂಡಾಡಿದ್ದಾರೆಂದರೆ ಅವರ ಅಭಿವೃದ್ಧಿ, ನೀರು, ಶಿಕ್ಷಣ, ವೃಕ್ಷ ಮತ್ತಿತರ ಜನಪರ ಕಾಳಜಿಗೆ ಸಿಕ್ಕ ಬಹುಮಾನವಲ್ಲದೆ ಮತ್ತೇನು? ಇದಕ್ಕಿಂತಲೂ ದೊಡ್ಡ ಪ್ರಶಸ್ತಿ ಯಾವುದಿದೆ? ನೀವೇ ಹೇಳಿ. ಅಂತೆಯೇ ಎಂ.ಬಿ. ಪಾಟೀಲರು ಕೂಡ ಪೂಜ್ಯ ಸಿದ್ಧೇಶ್ವರ ಶ್ರೀಗಳನ್ನು ಅಂತರಂಗದಲ್ಲಿಟ್ಟು ಪೂಜಿಸಿದವರು. ಪೂಜ್ಯರ ಲಿಂಗೈಕ್ಯರಾದಾಗ ಅಪಾರ ಯಾತನೆ ಅನುಭವಿಸಿದ್ದ ಎಂ.ಬಿ. ಪಾಟೀಲರು ಅಂತ್ಯಕ್ರಿಯೆ ವೇಳೆ ಪೂಜ್ಯರ ಕೈಲಾಸಯಾತ್ರೆಗೆ ಹೆಗಲು ಕೊಟ್ಟು ಭಕ್ತಿ ಭಾವ ಮೆರೆದಿದ್ದರು. ಆ ಅನುಪಮ ಸನ್ನಿವೇಶಕ್ಕೆ ಇದೀಗ ವರ್ಷ ತುಂಬುತ್ತಿದೆ. ಪೂಜ್ಯರ ಮೊದಲ ಪುಣ್ಯ ಸ್ಮರಣೋತ್ಸವ ಹಿನ್ನೆಲೆ ಡಿ. 24 ರಂದು ವೃಜ್ಷ ರಕ್ಷಣೆ, ಸ್ಮಾರಕಗಳ ಸಂರಕ್ಷಣೆ ಹಾಗೂ ಪರಿಸರ ಜಾಗೃತಿ ಮೂಡಿಸಲು 10 ಸಾವಿರ ಜನರಿಂದ ಹಾಪ್ ಮ್ಯಾರಾಥಾನ್ ಆಯೋಜಿಸುತ್ತಿದ್ದಾರೆ. ಯುವಕರು, ವೃದ್ಧರು ಹಾಗೂ ಬಾಲಕರಿಗಾಗಿ ಓಟ ಆಯೋಜಿಸಲಾಗುತ್ತಿದೆ. ಯುವಕರಿಗಾಗಿ 21 ಕಿಮೀ, ಬಾಲಕರಿಗಾಗಿ 10ಕಿಮೀ ಹಾಗೂ ವೃದ್ಧರಿಗಾಗಿ 2 ಕಿಮೀ ಓಟ ಆಯೋಜಿಸುತ್ತಿರುವುದು ಗುರು-ಶಿಷ್ಯರ ಅವಿನಾಭಾವ ಸಂಬಂಧಕ್ಕೆ ಸಾಕ್ಷಿ.

    ಬರದ ನಾಡನ್ನು ಬಂಗಾರವಾಗಿಸಿದ ಜಲನಾಯಕ

    ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅದರಲ್ಲೂ ವಿಶೇಷವಾಗಿ ಪಂಚ ನದಿಗಳ ಬೀಡಾಗಿದ್ದರೂ, ಬರಗಾಲದ ಹಣೆ ಪಟ್ಟಿಯನ್ನು ಶಾಶ್ವತವಾಗಿ ಅಂಟಿಸಿಕೊಂಡಿದ್ದ ವಿಜಯಪುರ ಜಿಲ್ಲೆಯ ಇತಿಹಾಸದಲ್ಲಿ 2013 ರಿಂದ 2018 ರ 5 ವರ್ಷಗಳ ಅವಧಿ ಅಭಿವೃದ್ಧಿ ದೃಷ್ಟಿಯಿಂದ ಸುವರ್ಣ ಯುಗವೆಂದರೆ ಅತಿಶಯೋಕ್ತಿಯಾಗಲಾರದು. 2013ರಲ್ಲಿ ಜಲ ಸಂಪನ್ಮೂಲ ಸಚಿವರಾಗಿ ಎಂ.ಬಿ. ಪಾಟೀಲರು ಮಾಡಿದ ಸಾಧನೆ ನಿಜಕ್ಕೂ ಅನನ್ಯ. 1300 ಕೋಟಿ ರೂ.ಗಳ ಅನುದಾನವನ್ನು ತಂದು ಬಬಲೇಶ್ವರ ವಿಧಾನಸಭೆ ಮತಕ್ಷೇತ್ರದ ರೈತರ ಬದುಕನ್ನು ಹಸನಾಗಿಸುವ ಜೊತೆಗೆ ಜಿಲ್ಲೆಯ ಬಹುತೇಕ ಕೆರೆಗಳನ್ನು ತುಂಬಿಸುವುದರ ಜೊತೆಗೆ ಬರದ ನಾಡನ್ನು ಬಂಗಾರದ ನಾಡನ್ನಾಗಿ ಪರಿವರ್ತಿಸಿದ ಕೀರ್ತಿಯು ಪಾಟೀಲರಿಗೆ ಸಲ್ಲುತ್ತದೆ.

    ಬಬಲೇಶ್ವರ ಮತಕ್ಷೇತ್ರದ ಕನಮಡಿ ಅತಿ ಎತ್ತರದ ಪ್ರದೇಶ ಇಲ್ಲಿಗೆ ನೀರಿನ ವ್ಯವಸ್ಥೆ ಮಾಡುವುದು ಸಾಧ್ಯವೇ ಇಲ್ಲ ಎಂಬುದು ನೀರಾವರಿ ತಜ್ಞರ ಅಭಿಮತ. ಆದರೆ ಈ ಪ್ರದೇಶಕ್ಕೂ ನೀರು ಹರಿಸುವ ಮೂಲಕ ಶಾಶ್ವತವಾಗಿ ಜನರ ಹೃದಯ ಸಿಂಹಾಸನದಲ್ಲಿ ಆಧುನಿಕ ಭಗೀರಥ ಎಂಬ ಬಿರುದನ್ನು ಪಡೆದು ವಿರಾಜಮಾನರಾದವರು ನಮ್ಮೆಲ್ಲರ ಹೆಮ್ಮೆಯ ಎಂ.ಬಿ. ಪಾಟೀಲರು. ಕರ್ನಾಟಕ ರಾಜ್ಯದ ನೀರಾವರಿ ಇಲಾಖೆಯಲ್ಲಿಯೇ ಮೊದಲ ಬಾರಿಗೆ 3.2 ಮೀಟರ್ ಅತಿ ದೊಡ್ಡ ಪೈಪ್‌ಗಳನ್ನು ಬಳಸಿ ಕೃಷ್ಣೆಯ ಒಡಲಿನಿಂದ ಭೂಮಾತೆಯ ಮಡಿಲಿಗೆ ನೀರು ತರೋದರ ಮೂಲಕ ರೈತನ ಮುಖದಲ್ಲಿ ಶಾಶ್ವತವಾಗಿ ನಗು ಮೂಡಿಸಿದರು. ಏಷ್ಯಾದಲ್ಲಿಯೇ ಅತಿ ಉದ್ದದ 15.7 ಕಿಲೋ ಮೀಟರ್ ತಿಡಗುಂಡಿಯ ವಯಾಡೆಕ್ಟ್ ನಿರ್ಮಾಣ ಮಾಡಿದರು. ಅಷ್ಟೇ ಅಲ್ಲದೆ ಕೆಲವು ಕಡೆ ಒಂದು ನೂರು ಅಡಿ ಎತ್ತರದ ಪಿಲ್ಲರ್‌ಗಳ ಮೇಲೆ ನಿರ್ಮಾಣವಾಗಿರುವ ಈ ವಯಾಡೆಕ್ಟೃ್ನ ವಿಶೇಷತೆ ಎಂದರೆ ಒಳಗಡೆ ನೀರು ಹರಿಯುತ್ತಿದ್ದರೆ ಅದರ ಮೇಲ್ಗಡೆ ವಾಹನಗಳು ಸಂಚರಿಸಬಹುದಾದ ವಿನೂತನವಾದ ಅಪರೂಪದ ಕೆಲಸವನ್ನು ಅವರ ಅಧಿಕಾರ ಅವಧಿಯಲ್ಲಿ ಮಾಡಿದ್ದು ಸಾಮಾನ್ಯವೇನಲ್ಲ.

    MB Patil

    ರಾಜ್ಯದ ನೀರಾವರಿ ಇಲಾಖೆ ಇತಿಹಾಸದಲ್ಲಿ ಮೊದಲ ಬಾರಿಗೆ ಮೆಟಾಲಿಕ್ ವ್ಯಾಲ್ಯುಟ್ ಪಂಪನ್ನು ಬಳಸಿದ ಕೀರ್ತಿ ಎಂ.ಬಿ. ಪಾಟೀಲರಿಗೆ ಸಲ್ಲುತ್ತದೆ. 46 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ರಾಜ್ಯದ ನೀರಾವರಿ ಯೋಜನೆಗಳಿಗೆ ಸಮರ್ಪಕವಾಗಿ ಬಳಸಿ ಅವುಗಳಿಗೆ ಟೆಂಡರ್ ಕರೆದು 2013 ರಿಂದ 2018ರ ಅವಧಿಯ ಒಳಗಾಗಿ ಈ ಸಂಪೂರ್ಣ ಹಣವನ್ನು ವಿನಿಯೋಗಿಸಿ ತಮ್ಮ ಅಧಿಕಾರ ಅವಧಿಯಲ್ಲಿಯೇ ಗುದ್ದಲಿ ಪೂಜೆ ಮಾಡಿ ಅವುಗಳನ್ನು ಲೋಕಾರ್ಪಣೆ ಮಾಡಿದ ಕೀರ್ತಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಪಾಟೀಲರಿಗೆ ಸಲ್ಲುತ್ತದೆ.
    ಅದಕ್ಕಾಗಿಯೇ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬಬಲೇಶ್ವರಕ್ಕೆ ಬಂದಾಗಲೊಮ್ಮೆ ಎಂ.ಬಿ. ಪಾಟೀಲರಂತವರು ವಿಧಾನಸೌಧದಲ್ಲಿದ್ದರೆ ವಿಧಾನಸೌಧಕ್ಕೂ ಒಂದು ಗೌರವ ನಿಮ್ಮ ಮತಕ್ಷೇತ್ರಕ್ಕೂ ಒಂದು ಗೌರವ ಎಂದು ಸದಾ ಹೇಳುತ್ತಿರುತ್ತಾರೆ. ಈ ಶತಮಾನದ ಸಂತ, ಜ್ಞಾನಯೋಗಿ ಸಿದ್ಧೇಶ್ವರ ಮಹಾಸ್ವಾಮಿಗಳು ಎಂ.ಬಿ. ಪಾಟೀಲ್ ಎಂದರೆ ನೀರು, ನೀರು ಎಂದರೆ ಎಂ.ಬಿ ಪಾಟೀಲ. ಎಲ್ಲಿಯವರೆಗೆ ನೀರು ಇರುತ್ತದೆಯೋ ಅಲ್ಲಿವರೆಗೆ ಎಂ.ಬಿ. ಪಾಟೀಲರ ಹೆಸರು ಶಾಶ್ವತವಾಗಿರುತ್ತದೆ ಎಂದು ಸಮಾರಂಭ ಒಂದರಲ್ಲಿ ಹೇಳಿದ್ದರು. ಯಾರ ಮುಖಸ್ತುತಿಯನ್ನೂ ಮಾಡದ ಶ್ರೀಗಳು ಪಾಟೀಲರನ್ನು ಹೊಗಳಿರುವುದು ಅವರಿಗೆ ನೊಬಲ್ ಬಹುಮಾನಕ್ಕಿಂತ ದೊಡ್ಡದಾಗಿದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಇದಕ್ಕಿಂತ ದೊಡ್ಡ ಸಾರ್ಥಕ್ಯ ಮತ್ತೇನಿದೆ.

    ನಮ್ಮ ಜಿಲ್ಲೆಯ ಹೆಮ್ಮೆಯ ಅನುಭಾವ ಕವಿಗಳಾಗಿದ್ದ ಮಧುರ ಚೆನ್ನರ ವಂಶಸ್ಥರಾದ ಶ್ರೇಷ್ಠ ಅಭಿಯಂತರರು, ನೀರಾವರಿ ತಜ್ಞರು ಆಗಿರುವ ಅರವಿಂದ ಗಲಗಲಿ ಅವರ ಪರಿಶ್ರಮ, ಕಾಳಜಿ, ಕಕ್ಕುಲತೆಯು ಅನನ್ಯವಾದದ್ದು. ಗಲಗಲಿ ಅವರನ್ನು ಒಳಗೊಂಡಂತೆ ರಾಜ್ಯದ ನೀರಾವರಿ ಇಲಾಖೆಯ ಎಲ್ಲಾ ಅಧಿಕಾರಿಗಳ ಸಮಸ್ತ ಅಭಿಯಂತರ ಶ್ರಮವನ್ನು ಹಾಗೂ ಇಂಥ ಅವಕಾಶವನ್ನು ಕಲ್ಪಿಸಿ ಕೊಟ್ಟ ಬ ಬಲೇಶ್ವರ ವಿಧಾನಸಭಾ ಕ್ಷೇತ್ರದ ಜನರನ್ನು ಸದಾ ಕೃತಜ್ಞತೆಯಿಂದ ಸ್ಮರಿಸುವ ತಾಯಿ ಹೃದಯದ ಜನನಾಯಕ ಎಂ.ಬಿ. ಪಾಟೀಲರ ಸರಳ ಸಹೃದಯತೆಯಿಂದ ಕೂಡಿದ ಸಜ್ಜನಿಕೆಯ ವ್ಯಕ್ತಿತ್ವ ಅವರದು.
    ಈ ಭಾಗದ ಪ್ರಭಾವಿ ಪೂಜ್ಯರಾದ ಕತ್ನಳ್ಳಿಯ ಶ್ರೀ ಶಿವಯ್ಯ ಮಹಾಸ್ವಾಮೀಜಿಯವರು ಎಂ.ಬಿ. ಪಾಟೀಲರ ಕೋಟಿ ವೃಕ್ಷ ಅಭಿಯಾನದ ಸಾರ್ಥಕ ಕಾರ್ಯಕ್ರಮದಲ್ಲಿ ಅವರನ್ನು ಅಭಿನಂದಿಸಿ ಹೇಳಿದ ಮಾತು, ಒಂದು ಸಸಿಯನ್ನು ರಕ್ಷಿಸಿದರೆ 15 ಅನಾಥ ಶಿಶುವನ್ನು ರಕ್ಷಿಸಿದ ಪುಣ್ಯ ಸಸಿಯನ್ನು ರಕ್ಷಿಸಿದವರಿಗೆ ದೊರೆಯುತ್ತದೆ. ಹೀಗಿದ್ದಾಗ ಕೋಟಿ ವೃಕ್ಷಗಳನ್ನು ನೆಡುವ ನಿಮ್ಮ ಸಂಕಲ್ಪಕ್ಕೆ ಅದೆಷ್ಟು ಲಕ್ಷ ಶಿಶುಗಳನ್ನು ಸಂರಕ್ಷಿಸಿದ ಪುಣ್ಯ ನಿಮ್ಮದಾಗಬಲ್ಲದು ಅಲ್ಲವೇ? ಎಂದು ಪುಣ್ಯ ಕಾರ್ಯ ಮಾಡಿದ ಎಂ.ಬಿ. ಪಾಟೀಲರಿಗೆ ನನ್ನ ಹೃದಯಪೂರ್ವಕ ಆಶೀರ್ವಾದಗಳು, ಎಂದು ಹೇಳಿ ಅಭಿನಂದಿಸಿದ್ದು ಈಗಲೂ ನೆನಪಿನಂಗಳದಲ್ಲಿದೆ. ಅವರು ಮಾಡುವ ಸಮಾಜಮುಖಿ ಕೆಲಸಗಳ ಬಗ್ಗೆ ಹೇಳುತ್ತಾ ಹೋದರೆ ದಿನಗಳು ಸಾಲಲಾರವು. ಅವರು ಶತಾಯುಷಿಗಳಾಗಬೇಕು ಮುಂಬರುವ ದಿನಗಳಲ್ಲಿ ಈ ನಾಡಿನ ಮುಖ್ಯಮಂತ್ರಿ ಆಗಬೇಕು ಎನ್ನುವುದು ಬಸವ ನಾಡಿನ ಹಾಗೂ ಸಮಸ್ತ ಜನತೆಯ ಅಭಿಲಾಷೆಯಾಗಿದೆ. ಅಂತಹ ಬಹುದೊಡ್ಡ ನಿರೀಕ್ಷೆಯೊಂದಿಗೆ ಇಂದು ನಾಡಿನಾದ್ಯಂತ ಹಾಗೂ ಮತಕ್ಷೇತ್ರದ ಪ್ರತಿ ದೇವಾಲಯಗಳಲ್ಲಿ ಅವರನ್ನು ಪ್ರೀತಿಸುವ ರೈತರು ತಾಯಂದಿರು ಅಬಾಲವೃದ್ಧರಾಗಿ ಎಲ್ಲರೂ ಬಸವಾದಿ ಶರಣರಲ್ಲಿ ಅವರ ಜನ್ಮದಿನದಂದು ಪ್ರಾರ್ಥಿಸಿ ಎಂ.ಬಿ. ಪಾಟೀಲರಿಗೆ ಶುಭವನ್ನು ಹಾರೈಸಿದ್ದಾರೆ.

    ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಮಹಾಜನತೆ ಕೊಟ್ಟ ಅಧಿಕಾರವನ್ನು ಅತ್ಯಂತ ಪ್ರಾಮಾಣಿಕವಾಗಿ ಈ ರಾಜ್ಯದ ರೈತರ ಬದುಕನ್ನು ಹಸನಾಗಿಸುವ ಪ್ರಯತ್ನ ಮಾಡಿದ ನಮ್ಮೆಲ್ಲರ ಪ್ರೀತಿಯ ಎಂ.ಬಿ. ಪಾಟೀಲ ರ ಜನ್ಮದಿನದಂದು ನಾಡಿನ ಜನತೆಯ ಪರವಾಗಿ ವಿಶೇಷವಾಗಿ ವಿಜಯಪುರ ಜಿಲ್ಲೆಯ ಜನತೆ ಪರವಾಗಿ ನಾನು ತುಂಬು ಹೃದಯದ ಅಭಿನಂದನೆಗಳನ್ನು ಜನ್ಮದಿನದ ಶುಭಾಶಯಗಳು ಕೋರುತ್ತೇನೆ.

    | ಸಂಗಮೇಶ ಬಬಲೇಶ್ವರ ಮುಖ್ಯ ವಕ್ತಾರರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts