ಎಂ.ಎನ್. ಕಳಸಾಪುರ ಲಕ್ಷೆ್ಮೕಶ್ವರ
ಜಮೀನಿನಲ್ಲಿ ಬೆಳೆದು ನಿಂತಿದ್ದ ಹೂವುಗಳನ್ನು ಲಾಕ್ಡೌನ್ ಕಾರಣದಿಂದಾಗಿ ಕೀಳಲು ಆಗುತ್ತಿಲ್ಲ. ಇದರಿಂದಾಗಿ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಮದುವೆ, ಹಬ್ಬ, ಜಾತ್ರೆ ವೇಳೆಗೆ ಕೈಗೆ ಬರುವಂತೆ ರೈತರು ಲೆಕ್ಕಾಚಾರ ಹಾಕಿ ಹೂವು ಬೆಳೆಯುತ್ತಾರೆ. ಅದರಂತೆ ಈ ವರ್ಷ ಮತ್ತೆ ಹೊಸ ಭರವಸೆ, ಆಸೆಯಿಂದ ಹೂವು ಬೆಳೆದಿದ್ದರು. ಆದರೆ, ಹೂವು ಮಾರಾಟದ ಮಾರುಕಟ್ಟೆಯನ್ನು ಬಂದ್ ಮಾಡಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಬಸ್ ನಿಲ್ದಾಣದ ಎದುರಿನ ಹೂವಿನ ಮಾರುಕಟ್ಟೆಯಲ್ಲಿ ನಿತ್ಯ ಬೆಳಗ್ಗೆ ಸವಾಲು ಮಾಡಲಾಗುತ್ತಿತ್ತು. ಆದರೆ, ಜನತಾ ಕರ್ಫ್ಯೂ, ಲಾಕ್ಡೌನ್ನಿಂದ ಮಾರುಕಟ್ಟೆ ಸಂಪೂರ್ಣ ಬಂದ್ ಮಾಡಲಾಗಿದೆ. ಹೀಗಾಗಿ ರೈತರು ಹೂವನ್ನು ಮಾರುಕಟ್ಟೆಗೆ ತರಲು ಆಗುತ್ತಿಲ್ಲ. ಇನ್ನೊಂದೆಡೆ ಹೂವು ಖರೀದಿಗೆ ವ್ಯಾಪಾರಸ್ಥರು ಕೂಡ ಮುಂದಾಗುತ್ತಿಲ್ಲ.
ಸದ್ಯ ಲಾಕ್ಡೌನ್ ಘೊಷಣೆಯಿಂದಾಗಿ ಸರ್ಕಾರದ ಮಾರ್ಗಸೂಚಿಯಂತೆ ಸಂತೆ, ಜಾತ್ರೆ, ಉತ್ಸವ, ಧಾರ್ವಿುಕ, ರಾಜಕೀಯ, ಮದುವೆ ಮತ್ತಿತರ ಸಮಾರಂಭಗಳಿಗೆ ನಿರ್ಬಂಧವಿದೆ. ಸಭೆ, ಸಮಾರಂಭಗಳಿದ್ದರಷ್ಟೇ ಹೂವಿಗೆ ಹೆಚ್ಚು ಬೇಡಿಕೆ ಇರುತ್ತದೆ. ಈಗ ಅವುಗಳು ಇಲ್ಲದರಿರುವುದರಿಂದ ಬೇಡಿಕೆ ಇಲ್ಲದಂತಾಗಿದೆ. ಅಲ್ಲದೆ, ಅಂತ್ಯ ಸಂಸ್ಕಾರಕ್ಕೂ ಹೆಚ್ಚು ಜನರು ಸೇರಲು ಅವಕಾಶ ಇಲ್ಲದ್ದರಿಂದ ಹೂವಿನ ಮಾಲೆಗಳಿಗೆ ಬೇಡಿಕೆ ಇಲ್ಲದಂತಾಗಿದೆ.
250ಕ್ಕೂ ಹೆಚ್ಚು ಪ್ರದೇಶದಲ್ಲಿ ಹೂವಿನ ಬೆಳೆ
ಲಕ್ಷೆ್ಮೕಶ್ವರ, ಮುನಿಯನ ತಾಂಡಾ, ಶ್ಯಾಬಳಾ, ಸೂರಣಗಿ, ಉಳ್ಳಟ್ಟಿ, ದೊಡ್ಡೂರ, ಸೂರಣಗಿ, ಶಿಗ್ಲಿ ಸೇರಿ ಒಟ್ಟು 250ಕ್ಕೂ ಹೆಚ್ಚು ಪ್ರದೇಶದಲ್ಲಿ ಗಲಾಟೆ, ಗುಲಾಬಿ, ಸೇವಂತಿ, ಮಲ್ಲಿಗೆ ಹೂವು ಬೆಳೆಯಲಾಗಿದೆ. ಇವರಿಗೆಲ್ಲ ಲಕ್ಷೆ್ಮೕಶ್ವರ ಪಟ್ಟಣವೇ ಮುಖ್ಯ ಮಾರುಕಟ್ಟೆಯಾಗಿದೆ.
ಹಬ್ಬಗಳ ವೇಳೆ ಹೂವಿನ ಬೆಳೆ ಕೈ ಸೇರುವ ಲೆಕ್ಕಾಚಾರದೊಂದಿಗೆ ಒಂದೂವರೆ ಎಕರೆ ಜಮೀನಿನಲ್ಲಿ 50 ಸಾವಿರ ರೂಪಾಯಿ ಖರ್ಚು ಮಾಡಿ ಗಲಾಟೆ ಹೂವು ಬೆಳೆದಿದ್ದೇನೆ. ಆದರೆ, ಒಂದು ತಿಂಗಳಿಂದ ತೋಟದಲ್ಲಿ ಸಮೃದ್ಧ ಹೂವು ಅರಳುತ್ತಿವೆ. ಆದರೆ, ಈಗ ಹೂವುಗಳನ್ನು ಕೇಳುವವರೇ ಇಲ್ಲದ್ದರಿಂದ ತೋಟದಲ್ಲಿಯೇ ಬಾಡುತ್ತಿವೆ. 15 ದಿನ ಲಾಕ್ಡೌನ್ ವಿಧಿಸಿದ್ದರಿಂದ ದಿಕ್ಕು ತೋಚದಂತಾಗಿದೆ.
ಕಳೆದ ವರ್ಷ ಕರೊನಾ ಸಂಕಷ್ಟದಿಂದ ನಷ್ಟ ಅನುಭವಿಸಿದ ಕೆಲ ಹೂವು ಬೆಳೆಗಾರರಿಗೆ ಸರ್ಕಾರ ಸಹಾಯಧನ ನೀಡಿತ್ತು. ಈ ವರ್ಷವಾದರೂ ತೋಟಗಾರಿಕೆ ಬೆಳೆಗಾರರಿಗೆ ಸಹಾಯಧನ ನೀಡಬೇಕು.
| ಶಿವನಗೌಡ ಪಾಟೀಲ ಹೂವು ಬೆಳೆಗಾರ ಲಕ್ಷೆ್ಮೕಶ್ವರ
ಹೂವು ಬೆಳೆಗಾರರು ಸೇರಿ ಇತರ ತೋಟಗಾರಿಕೆ ಬೆಳೆ ಬೆಳೆದ ರೈತರು ಕರೊನಾದಿಂದ ನಷ್ಟ ಅನುಭವಿಸಿದ್ದಾರೆ. ಈ ಬಗ್ಗೆ ಸಮಗ್ರ ಮಾಹಿತಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಸರ್ಕಾರ ಪರಿಹಾರ ಘೊಷಣೆ ಮಾಡಿದರೆ ರೈತರಿಂದ ಅರ್ಜಿ ಪಡೆಯಲಾಗುವುದು. ಸದ್ಯಕ್ಕೆ ಯಾವುದೇ ಅಧಿಕೃತ ಮಾಹಿತಿ ಇಲ್ಲ
| ಸುರೇಶ ಕುಂಬಾರ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ