ಬೆಳಗಾವಿ: ಮಧ್ಯಪ್ರದೇಶದ ಮೊರೆನಾದಲ್ಲಿ ಭಾರತೀಯ ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಹುತಾತ್ಮರಾಗಿದ್ದಾರೆ. ದೆಹಲಿಯಿಂದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಅವರ ಮೃತದೇಹ ಆಗಮಿಸಲಿದ್ದು, ಬಳಿಕ ಬೆನಕನಹಳ್ಳಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
ಹುತಾತ್ಮ ವೀರ ಯೋಧ ಹನುಮಂತರಾವ್ ಅವರ ಇಡೀ ಕುಟುಂಬವೇ ದೇಶ ಸೇವೆಗೆ ಸಮರ್ಪಣೆ ಮಾಡಿಕೊಂಡಿದೆ. ಪಠಾಣಕೋಟ್ ಏರ್ಬೇಸ್ನಲ್ಲಿದ್ದ ಹನುಮಂತರಾವ್, ಪಾಕಿಸ್ತಾನ ವಿರುದ್ಧದ ಸರ್ಜಿಕಲ್ ಸ್ಟ್ರೈಕ್ ವೇಳೆ ರಿಜರ್ವ್ ಟೀಮ್ನಲ್ಲಿದ್ದರು. ಅವರ ತಂದೆ ರೇವಣ್ಣ ಸಿದ್ಧಪ್ಪ 32 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಹುತಾತ್ಮ ವೀರ ಯೋಧ ಹನುಮಂತರಾವ್ ಸಹೋದರ ಪ್ರವೀಣ್ ಭಾರತೀಯ ವಾಯುಸೇನೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿದ್ದಾರೆ. ಸಹೋದರ ಪ್ರವೀಣ್ ಪತ್ನಿಯೂ ಏರ್ ಫೋರ್ಸ್ನಲ್ಲಿ ಪೈಲೆಟ್ ಆಫೀಸರ್ ಆಗಿದ್ದಾರೆ. ಜತೆಗೆ ಹುತಾತ್ಮ ಹನುಮಂತರಾವ್ ಪತ್ನಿ ಏರ್ ಪೋರ್ಸ್ ನಲ್ಲಿ ಅಕೌಂಟ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಧ್ಯಪ್ರದೇಶದ ಮೊರೆನಾ ಸಮೀಪ ಸುಖೋಯ್ 30 ಹಾಗೂ ಒಂದು ಮಿರಾಜ್ 2000 ಯುದ್ಧವಿಮಾನ ಪತನವಾಗಿತ್ತು. ಈ ಎರಡೂ ವಿಮಾನಗಳು ಗ್ವಾಲಿಯರ್ ವಾಯುನೆಲೆಯಿಂದ ಟೇಕಾಫ್ ಆಗಿದ್ದವು. ಘಟನೆಗೆ ಕಾರಣ ತಿಳಿಯಲು ಭಾರತೀಯ ವಾಯುಪಡೆ ತನಿಖೆಗೆ ಆದೇಶ ಮಾಡಿದೆ.