ಮದ್ದೂರು: ಕೇಂದ್ರ ಚುನಾವಣಾ ಆಯೋಗ ವಿಶ್ವದಲ್ಲೇ ಶ್ರೇಷ್ಠ ಹಾಗೂ ಬಲಿಷ್ಠವಾದದ್ದು ಎಂದು ಎಚ್.ಡಿ.ಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಬೋರಮ್ಮ ವಿಶ್ಲೇಷಿಸಿದರು.
ತಾಲೂಕಿನ ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಶ್ತ್ರ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಭಾರತದ ಚುನಾವಣಾ ಸುಧಾರಣೆಗಳು ಮತ್ತು ಮತದಾರರ ಜಾಗೃತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷಾಂತರ ನಿಷೇಧ ಕಾಯ್ದೆ ಪ್ರಜಾತಾಂತ್ರಿಕ ಮೌಲ್ಯದ ಶ್ರೇಯಸ್ಸು ಎಂದು ಬಣ್ಣಿಸಿದರು.
ಮತದಾನ ಶ್ರೇಷ್ಠ ಕಾರ್ಯ. ಆರಂಭದಲ್ಲಿ 21 ವರ್ಷಕ್ಕಿದ್ದ ಅವಕಾಶವನ್ನು 18 ವರ್ಷಕ್ಕೆ ಇಳಿಕೆ ಮಾಡಲಾಯಿತು. ಇದು ಆಯೋಗದ ಮತ್ತೊಂದು ದೊಡ್ಡ ಸುಧಾರಣೆ ಎಂದು ಅಭಿಪ್ರಾಯಪಟ್ಟರು.
ಚುನಾವಣಾ ಆಯೋಗ ಸುಧಾರಣೆ ಮಾಡುವಾಗ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತದೆ. ಆ ಸಂದರ್ಭದಲ್ಲಿ ಮತದಾರರು ಮತ್ತಷ್ಟು ಸಲಹೆ ನೀಡುವುದು ಒಳ್ಳೆಯದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಸರ್ಕಾರ ರಚನೆಗೆ ಮುಂದಾಗಬಹುದು ಎಂದರು.
ಪ್ರಾಂಶುಪಾಲ ಡಾ.ಅಣ್ಣಯ್ಯ ತೈಲೂರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಲತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯುಎಸಿ ಸಂಚಾಲಕ ಡಾ.ಉಮೇಶ್, ಉಪನ್ಯಾಸಕಿ ಡಾ.ಅಮೃತಾ ಪಾಲ್ಗೊಂಡಿದ್ದರು.