ಕೋಲಾರ: ಸಾಲ ತೀರಿಸಲಾಗದೆ ವ್ಯಕ್ತಿಯೋರ್ವ ತನ್ನ ಮಗನನ್ನೇ ಮಾರಾಟ ಮಾಡಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಆರೋಪಿ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಗಾರಪೇಟೆ ನಗರ ನಿವಾಸಿಗಳಾದ ಮುನಿರಾಜು ಹಾಗೂ ಪವಿತ್ರ ದಂಪತಿಯ ಮೂರು ತಿಂಗಳ ಮಗು ಇದಾಗಿದೆ. ಬಂಗಾರಪೇಟೆಯ ಕೆರೆಕೋಡಿ ನಿವಾಸಿಯಾದ ವಲ್ಲಿ ಎನ್ನುವ ಮಹಿಳೆ ಮೂಲಕ ಮುನಿರಾಜು, ಮಗು ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.
ಮಹದೇವಪುರದ ಸೂಲಿಕುಂಟೆ ಗ್ರಾಮದ ನಿವಾಸಿ ಪವಿತ್ರ ಹಾಗೂ ಶ್ರೀನಿವಾಸಪುರದ ನಿವಾಸಿ ಮುನಿರಾಜುಗೆ 8 ವರ್ಷಗಳ ಹಿಂದೆ ಮದುವೆ ಮಾಡಲಾಗಿತ್ತು. ದಂಪತಿಗೆ ಜೂನ್ 21, 2023ರಂದು ಗಂಡು ಮಗು ಜನಿಸಿತ್ತು. ಮಗುವಿಗೆ 3 ತಿಂಗಳು ಆಗಿದ್ದಾಗ ಬಾಣಂತಿ ಪವಿತ್ರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆರೋಪಿ ತಾಯಿ ಹಾಗೂ ಮಗುವನ್ನು ಬೇರ್ಪಡಿಸಿ ಗೃಹಬಂಧನದಲ್ಲಿ ಇರಿಸಿದ್ದ ಎಂದು ದೂರಲಾಗಿದೆ.
ಇದನ್ನೂ ಓದಿ: ಕಚ್ಚಾ ಬಾದಾಮ್ ಹಾಡು ನಿಮಗೆ ನೆನಪಿದೆಯೇ; ಹಾಡಿದ ವ್ಯಕ್ತಿ ಈಗ ಎಲ್ಲಿದ್ದಾರೆ, ಏನು ಮಾಡ್ತಿದ್ದಾರೆ ಗೊತ್ತಾ?
ಬಳಿಕ ಹಣದಾಸೆಗೆ ಬಿದ್ದ ಆರೋಪಿ ಮುನಿರಾಜು ಕೆರೆಕೋಡಿ ನಿವಾಸಿಯಾದ ವಲ್ಲಿ ಎಂಬುವವರಿಗೆ ಮಗುವನ್ನು ಮಾರಾಟ ಮಾಡಿದ್ದಾನೆ. ಈ ವಿಚಾರವನ್ನು ತಿಳಿದಿ ತಾಯಿ ಪವಿತ್ರ ಮಗುವನ್ನ ವಾಪಸ್ ಕೊಡಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ , ಮಹಿಳಾ ಆಯೋಗ ಮತ್ತು ಬಂಗಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಸ್ತ್ರೀಶಕ್ತಿ ಸಂಘದಲ್ಲಿ ಮಾಡಿರುವ ಸಾಲವನ್ನು ತೀರಿಸುವ ಸಲುವಾಗಿ ಮಗುವನ್ನು ಮಾರಾಟ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ತನ್ನ ಮಗುವನ್ನು ತನಗೆ ವಾಪಸ್ ಕೊಡಿಸುವಂತೆ ತಾಯಿ ಪವಿತ್ರ ಕಣ್ಣೀರು ಹಾಕಿದ್ದಾರೆ.