ಕೋಲಾರ: ಡಾ.ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ನಮಗೆ ತಾಯಿ ಇದ್ದಂತೆ. ತಾಯಿಗಿಂತ ದೊಡ್ಡವರು ವಿಶ್ವದಲ್ಲೇ ಇಲ್ಲ. ಇಡೀ ಜಗತ್ತಿಗೆ ಮಾದರಿ ಭಾರತದ ಸಂವಿಧಾನ ಎಂದು ಕೊಂಡರಾಜನಹಳ್ಳಿ ಗ್ರಾ.ಪಂ ಅಧ್ಯಕ್ಷ ವಿಜಯನಗರ ಮಂಜುನಾಥ್ ಹೇಳಿದರು.
ಕೋಲಾರ ತಾಲೂಕಿನ ಕೊಂಡರಾಜನಹಳ್ಳಿ ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾವನ್ನು ಸ್ವಾಗತಿಸಿ ಮಾತನಾಡಿ, ರಾಜ್ಯ ಸರ್ಕಾರ ಸಂವಿಧಾನದ ಜಾಗೃತಿ ಮೂಡಿಸುವ ಸಲುವಾಗಿ ಜ.26ರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡಿದೆ. ಸಂವಿಧಾನ ಆಶಯಗಳನ್ನು ಈಡೇರಿಸಲು ಪಣ ತೊಡಬೇಕು ಎಂದರು.
ಕೇಂದ್ರಸ್ಥಾನಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚರಿಸಿ ಸಂವಿಧಾನದ ಮಹತ್ವ ಹಾಗೂ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ರಾಷ್ಟ್ರೀಯ ಏಕತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಜಾಗೃತಿ ಜಾಥಾ ನಡೆಯುತ್ತಿದೆ ಎಂದು ಹೇಳಿದರು.
ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ ಮಾತನಾಡಿ, ಸಂವಿಧಾನ ಇರುವುದರಿಂದ ನಾವೆಲ್ಲರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವೆ. ಹಾಗಾಗಿ ಸಂವಿಧಾನದ ನೀತಿ ನಿಯಮಗಳನ್ನು ನಾವೆಲ್ಲ ಪಾಲನೆ ಮಾಡಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್, ಕೊಂಡರಾಜನಹಳ್ಳಿ ಗ್ರಾ.ಪಂ.ಉಪಾಧ್ಯಕ್ಷೆ ನಾರಾಯಣಮ್ಮ, ಸದಸ್ಯರಾದ ಶ್ರೀನಿವಾಸ್ ಯಾದವ್, ರಾಮಕ್ಕ, ಎಂ.ರಾಜೇಶ್, ಎಂ.ಗೋವಿಂದ್, ನಾಗರತ್ನ, ಲಿಂಗಪ್ಪ, ಎಸ್.ಸುಜಾತಾ, ವಿ.ವೆಂಕಟಾಚಲಪತಿ, ಚೋತಿಮಾ, ಎನ್.ನಾಗೇಶ್, ಎನ್.ಪ್ರಕಾಶ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಬಸಪ್ಪ, ಗ್ರಂಥಾಲಯ ಮೇಲ್ವಿಚಾರಕಿ ಕೊಂಡರಾಜನಹಳ್ಳಿ ಮಂಜುಳಾ ಹಾಜರಿದ್ದರು.