ಬೀರೂರು: ಗ್ರಾಮೀಣ ಸೊಗಡಿನ ವೇಷ , ಭೂಷಣದೊಂದಿಗೆ ಇಲ್ಲಿನ ಬಸಪ್ಪ ಬಡಾವಣೆ ಮಕ್ಕಳು ಎತ್ತಿನಗಾಡಿ ಹತ್ತಿ ಬಂಡಿ ಓಟದ ಸವಿಯನ್ನು ಸವಿಯುವ ಮೂಲಕ ಸಂಕ್ರಾಂತಿ ಹಬ್ಬ ಆಚರಿಸಿದರು.
ಎತ್ತಿನಗಾಡಿ ಮೂಲಕ ವಿವಿಧ ಸಾಂಪ್ರದಾಯಿಕ ಉಡುಗೆಯಲ್ಲಿ ಬಂದ ಮಕ್ಕಳನ್ನು ನಿವಾಸಿಗಳು ಆರತಿ ಬೆಳಗುವ ಮೂಲಕ ಬರ ಮಾಡಿಕೊಂಡು ಸಂಕ್ರಾಂತಿ ಹಬ್ಬದ ಮಹತ್ವದ ಮಾಹಿತಿ ನೀಡಿದರು. ನಂತರ ಬಡಾವಣೆ ರಂಗಮಂದಿರದಲ್ಲಿ ಹಿರಿಯರಿಂದ ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳಿಗೆ ಕೋಲಾಟ, ಜಾನಪದ ನೃತ್ಯ ಜಾನಪದ ಗೀತಗಾಯನ ಸೇರಿದಂತೆ ಹಲವು ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಿ ಮಕ್ಕಳನ್ನು ಪ್ರೋತ್ಸಾಹಿಸಲಾಯಿತು.
ಮಕ್ಕಳಿಗೆ ಸುಗ್ಗಿಹಬ್ಬದ ಎಳ್ಳುಬೆಲ್ಲ, ಕಬ್ಬು, ಅವರೆ ಕಾಯಿ, ಸಿಹಿ ಪೊಂಗಲ್ ಹಾಗೂ ಕಾರದ ಹುಗ್ಗಿ , ರೈತರ ಜಾನಪದ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆ ಕುರಿತಂತೆ ಮಲ್ಲಿಕಾ ರಾಘವೇಂದ್ರ ಮಾಹಿತಿ ನೀಡಿದರು. ಬಡಾವಣೆ ನಿವಾಸಿಗಳಾದ ಮಹಾಬಲರಾವ್, ರಾಘವೇಂದ್ರ, ಶಂಕರ ಹೆಬ್ಬಾರ್, ಮಮತಾ ಆನಂದ್, ಸವಿತಾ ಸುರೇಶ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಸುದರ್ಶನ್ ಮತ್ತಿತರರಿದ್ದರು.