ಕಡಬ: ತಾಲೂಕಿನ ದೋಳ್ಪಾಡಿ ಗ್ರಾಮದ ದಿ.ನಾಗಪ್ಪ ಅವರ ಪುತ್ರ ದೇವರಾಜ ಎಂಬಾತನ ಮೃತದೇಹ ಕಾಡಿನಲ್ಲಿ ಕವಚಿ ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿದೆ.
ದೇವರಾಜ ಲಾರಿ ಚಾಲಕನಾಗಿದ್ದು, ಕಾಣಿಯೂರು ಗ್ರಾಮದ ನಾವೂರು ಅನಿತಾ ಎಂಬುವರನ್ನು 13 ವರ್ಷಗಳ ಹಿಂದೆ ವಿವಾಹವಾಗಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ದೇವರಾಜ ಅಮಲು ಪದಾರ್ಥ ಸೇವಿಸಿ ಪತ್ನಿ ಅನಿತಾಳೊಂದಿಗೆ ಜಗಳ ಮಾಡುತ್ತಿದ್ದು, ಹಲವು ಬಾರಿ ಕುಟುಂಬಸ್ಥರು ಬುದ್ದಿಮಾತು ತಿಳಿಸಿದ್ದರು. ನ.28ರಂದು ರಾತ್ರಿ ದೇವರಾಜ ಅಮಲು ಪದಾರ್ಥ ಸೇವಿಸಿ ಪತ್ನಿ ಜತೆ ಜಗಳವಾಡಿದ್ದು, ಅವರ ತಂದೆ ನಾಗಪ್ಪ ಮನೆಗೆ ಬಂದು ಬುದ್ದಿವಾದ ಹೇಳಿದ್ದರು. ಡಿ.29ರಂದು ದೇವರಾಜ ನಾಪತ್ತೆಯಾಗಿದ್ದು, ಸ್ಥಳೀಯರು, ಮನೆಯವರು ಹುಡುಕಾಟ ನಡೆಸಿದ್ದರು. ಡಿ.2ರಂದು ಆತನ ಮೃತದೇಹ ದೊಲ್ಪಾಡಿ ಗ್ರಾಮದ ಕೊಜಂಬಾಡಿ ಅರಣ್ಯ ಪ್ರದೇಶದಲ್ಲಿ ಕವಚಿ ಬಿದ್ದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಡಬ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.