ನವದೆಹಲಿ: ಜಮ್ಮು ಕಾಶ್ಮೀರದ ಶ್ರೀನಗರ ಹೆದ್ದಾರಿಯ ನಗ್ರೋಟಾದಲ್ಲಿ ಭದ್ರತಾ ಪಡೆ ನಡೆಸಿದ ಎನ್ಕೌಂಟರ್ಗೆ ನಾಲ್ವರು ಉಗ್ರರು ಬಲಿಯಾದ ಬೆನ್ನಿಗೆ ಆತಂಕಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಮುಂಬೈ ದಾಳಿ ನಡೆದ ಅದೇ ದಿನ 26/11 ರಂದು ಮತ್ತೊಮ್ಮೆ ಉಗ್ರ ದಾಳಿ ನಡೆಸುವುದಕ್ಕೆ ಭಯೋತ್ಪಾದಕರು ಸಂಚು ರೂಪಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ನಗ್ರೋಟಾ ಎನ್ಕೌಂಟರಿಗೆ ಸಂಬಂಧಿಸಿ ಒಟ್ಟಾರೆ ಪರಿಸ್ಥಿತಿ ಅವಲೋಕಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗೃಹ ಸಚಿವ ಅಮಿತ್ ಷಾ, ಎನ್ಎಸ್ಎ ಅಜಿತ್ ದೋವಲ್, ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಗುಪ್ತಚರ ಸಂಸ್ಥೆಯ ಉನ್ನತಾಧಿಕಾರಿಗಳ ಜತೆಗೆ ಮಾತುಕತೆ ನಡೆಸಿದರು. ಲಭ್ಯ ಪ್ರಾಥಮಿಕ ಮಾಹಿತಿ ಪ್ರಕಾರ, ಈ ಪಾಕಿಸ್ತಾನಿ ಉಗ್ರರು ಮುಂಬೈ ದಾಳಿಯ 26/11 ದಿನವೇ ಮತ್ತೊಮ್ಮೆ ದಾಳಿ ನಡೆಸುವುದಕ್ಕೆ ಸಂಚು ರೂಪಿಸಿದ್ದರು.
ಇದನ್ನೂ ಓದಿ : ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಯೋಧರು- ಹೆದ್ದಾರಿ ಕ್ಲೋಸ್
ಉಗ್ರರು ಆ್ಯಪಲ್ ಟ್ರಕ್ನಲ್ಲಿ ಅಡಗಿಕೊಂಡು ಪ್ರಯಾಣಿಸುತ್ತಿದ್ದರು. ಗುಪ್ತಚರ ಸಂಸ್ಥೆ ನೀಡಿದ ಖಚಿತ ಮಾಹಿತಿ ಆಧರಿಸಿ ಭದ್ರತಾ ಪಡೆ ನಾಲ್ವರು ಶಂಕಿತ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿತ್ತು. ಹೆದ್ದಾರಿಯಲ್ಲಿ ಕೆಲವು ಗಂಟೆಗಳ ಕಾಲ ಗುಂಡಿನ ದಾಳಿ ನಡೆಯಿತು. ಕಾರ್ಯಾಚರಣೆ ವೇಳೆ ಹೆದ್ದಾರಿಯಲ್ಲಿ ಸಾರ್ವಜನಿಕ ಪ್ರಯಾಣ ನಿಷೇಧಿಸಲಾಗಿತ್ತು. ಉಗ್ರರನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಕಾಶ್ಮೀರ ಕಣಿವೆಯ ಕಡೆಗೆ ಸಾಗುತ್ತಿತ್ತು. ಉಗ್ರ ಶೋಧ ಕಾರ್ಯ ಶುರುಮಾಡಿದ ವೇಳೆ ಈ ಟ್ರಕ್ನಲ್ಲಿದ್ದವರು ಭದ್ರತಾ ಪಡೆಯ ಮೇಲೆ ಗುಂಡಿನ ದಾಳಿ ಶುರುಮಾಡಿದರು. ಭದ್ರತಾ ಪಡೆ ನಡೆಸಿದ ಪ್ರತಿದಾಳಿಗೆ ಅವರು ಬಲಿಯಾದರು ಎಂದು ಸರ್ಕಾರದ ಉನ್ನತ ಮೂಲ ತಿಳಿಸಿದೆ. (ಏಜೆನ್ಸೀಸ್)
ಲವ್ನಲ್ಲಿ ಜಿಹಾದ್ಗೆ ಜಾಗವೇ ಇಲ್ಲ – ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ‘ಪ್ರೇಮ’ ಪಾಠ !