ತೇರದಾಳ: ತೇರದಾಳ ಪುರಸಭೆ ಅಧ್ಯಕ್ಷರಾಗಿ ಅನ್ನಪೂರ್ಣ ಸದಾಶಿವ ಹೊಸಮನಿ, ಉಪಾಧ್ಯಕ್ಷರಾಗಿ ಶಾಂತವ್ವ ರುದ್ರಪ್ಪ ಕಾಲತಿಪ್ಪಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ತಹಸೀಲ್ದಾರ್ ಪ್ರಶಾಂತ ಚನಗೊಂಡ ತಿಳಿಸಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬ ಮೀಸಲಾತಿ ಇತ್ತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ದಿಂದ ನಸ್ರೀನ್ಬಾನು ನಗಾರ್ಜಿ, ಬಿಜೆಪಿಯಿಂದ ಅನ್ನಪೂರ್ಣ ಹೊಸಮನಿ ನಾಮಪತ್ರ ಸಲ್ಲಿಸಿದ್ದರು. ನಸ್ರೀನ್ಬಾನು ನಗಾರ್ಜಿಗೆ 10 ಮತಗಳು ಲಭ್ಯವಾದರೆ, ಅನ್ನಪೂರ್ಣ ಹೊಸಮನಿ ಅವರಿಗೆ ಸಂಸದ ಎಂ.ಪಿ.ಗದ್ದಿಗೌಡರ ಹಾಗೂ ಶಾಸಕ ಸಿದ್ದು ಸವದಿ ಮತ್ತು ಪಕ್ಷೇತರ ಅಭ್ಯರ್ಥಿಗಳ ಮೂರು ಮತಗಳು ಸೇರಿ 15 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಉಪಾಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ದಿಂದ ಆದಿನಾಥ ಸಪ್ತಸಾಗರ, ಬಿಜೆಪಿಯಿಂದ ಶಾಂತವ್ವ ಕಾಲತಿಪ್ಪಿ ಸ್ಪರ್ಧಿಸಿದ್ದರು. ಕಾಂಗ್ರೆಸ್ನ ಅಭ್ಯರ್ಥಿ 10 ಮತ ಪಡೆದರೆ, ಬಿಜೆಪಿಯ ಶಾಂತವ್ವ ಕಾಲತಿಪ್ಪಿ ಹದಿನೈದು ಮತಗಳನ್ನು ಪಡೆದು ಆಯ್ಕೆಯಾದರು ಎಂದು ತಿಳಿಸಿದರು.
ಅಭಿವೃದ್ಧಿ ಒತ್ತು
ಶಾಸಕ ಸಿದ್ದು ಸವದಿ ಮಾತನಾಡಿ, ಪಟ್ಟಣದ ಅಭಿವೃದ್ಧಿಗಾಗಿ ಸದಾ ಸೇವೆ ಸಲ್ಲಿಸಬೇಕೆಂದು ನೂತನ ಅಧ್ಯಕ್ಷೆ, ಉಪಾಧ್ಯಕ್ಷರಿಗೆ ಕಿವಿಮಾತು ಹೇಳಿದರು. ಸಂಸದ ಪಿ.ಸಿ.ಗದ್ದಿಗೌಡರ ಸೇರಿ ಕಾರ್ಯಕರ್ತರು ಇದ್ದರು.
ಶಾಂತಿಯುತ ಮತದಾನ
ಮತದಾನ ಪ್ರಕ್ರಿಯೆ ಎರಡು ಗಂಟೆ ಶಾಂತಿಯುತವಾಗಿ ನಡೆಯಿತು. ಪರ ಮತ್ತು ವಿರೋಧ ಪಕ್ಷದ ಸದಸ್ಯರು ಪ್ರತ್ಯೇಕವಾಗಿ ಕೈಎತ್ತುವುದರ ಮೂಲಕ ಮತ ಎಣಿಕೆ ಮಾಡಲಾಯಿತು. ಚುನಾವಣೆ ಪ್ರಕ್ರಿಯೆಯಲ್ಲಿ ತಹಸೀಲ್ದಾರ್ ಸೇರಿ ಶಿರಸ್ತೆದಾರ್ ಎಸ್.ಐ. ಸೂಳಿ, ಮುಖ್ಯಾಧಿಕಾರಿ ಈರಣ್ಣ ದಡ್ಡಿ ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಿದರು.
ಬೀಗಿ ಬಂದೋ ಬಸ್ತ
ಪೊಲೀಸರು ಬೀಗಿ ಬಂದೋ ಬಸ್ತ್ ಒದಗಿಸಿದ್ದರು. ಬನಹಟ್ಟಿ ಸಿಪಿಐ ಜೆ.ಕರುಣೇಶಗೌಡ, ಬನಹಟ್ಟಿ ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ, ತೇರದಾಳ ಠಾಣಾಧಿಕಾರಿ ವಿಜಯ ಕಾಂಬಳೆ ನೇತೃತ್ವದಲ್ಲಿ ಪೊಲೀಸ್ ಹಾಗೂ ಮೀಸಲು ಪಡೆ ಸಿಬ್ಬಂದಿ ಕಾರ್ಯನಿರ್ವಹಿಸಿದರು.