ತೇರದಾಳ: ಕರೊನಾ ವೈರಸ್ನಿಂದಾಗಿ ಮಂಗಳವಾರ ನಡೆಯಬೇಕಿದ್ದ ಸಂತೆ ರದ್ದಾಗಿದೆ. ಜಾತ್ರಿ, ನಿಬ್ಬಣದಾಗ ಜೋಡ ಕುಂಡ್ರುದು, ಜೋಡ ತಿರಗಾಡೊದು ಯಾರು ಮಾಡ್ಬಾರ್ದು ಎಂದು ಡಂಗುರದ ಮೂಲಕ ಜನರಿಗೆ ತಿಳಿಸುವ ಕಾರ್ಯ ನಡೆದಿದೆ. ಈ ಮೂಲಕ ಕರೊನಾ ಮಾರಿ ಮನೆ ಬಾಗಿಲಿಗೆ ಬಂದು ನಿಂತಂತಾಗಿದೆ.
ಕರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವಾರದ ಸಂತೆಗಳನ್ನು ನಿಷೇಧಿಸಿದ ಹಿನ್ನೆಲೆ ಸಮೀಪದ ಹನಗಂಡಿ ಗ್ರಾಮದಲ್ಲಿ ಡಂಗುರ ಸಾರುವ ಮೂಲಕ ವಾರದ ಸಂತೆ ರದ್ದು ಮಾಡಲಾಯಿತು.
ಜಾಗೃತಿ ವಿಡಿಯೋ ವೈರಲ್
ಶಿವಪ್ರಸಾದ ಎಂಬ ಮೆಡಿಕಲ್ ವಿದ್ಯಾರ್ಥಿ ವಾಟ್ಸ್ಆ್ಯಪ್ ಮೂಲಕ ಕರೊನಾ ಕುರಿತ ಐದು ನಿಮಿಷದ ಜಾಗೃತಿ ವಿಡಿಯೋ ಹಂಚಿಕೊಂಡಿರುವುದು ವೈರಲ್ ಆಗಿದೆ. ವಿಡಿಯೋದಲ್ಲಿ ಹೇಳಿದಂತೆ 2002ರ ಸಾರ್ಸ್, 2005 ಮರ್ಸ್, ಯಬೊಲಾಗಳಿಗಿರುವ ಮಾರ್ಟಾಲಿಟಿಗೆ(ಸಾವಿನ ಸಂಖ್ಯೆಯ ದರ) ಹೊಲಿಸಿದರೆ ಕರೊನಾ (ಭಾರತ ದರ ಶೇ.1.8) ಏನು ಅಲ್ಲ. ಆದರೆ, ನ್ಯೂಸ್ ಚಾನಲ್ಗಳು ಟಿಆರ್ಪಿಗಾಗಿ ಹೆಮ್ಮಾರಿ ರೀತಿ ಬೆಳೆಸುತ್ತಿದ್ದಾರೆ. ನೀವು ಕರೊನಾಗೆ ಹೆದರಬೇಡಿ. ಮುನ್ನೆಚ್ಚರಿಕೆ ಕ್ರಮ ಮಾತ್ರ ವಹಿಸಿ ಎಂದಿರುವುದು ಹಲವಾರು ಗ್ರೂಪ್ಗಳಲ್ಲಿ ಹರಿದಾಡುತ್ತಿದೆ. ಹೀಗಾಗಿ ಕರೊನಾ ಎಂಬುವುದು ಹಲವರ ಚರ್ಚಾ ವೇದಿಕೆಯಾಗಿದೆ.
ಚೆಕ್ ಪೋಸ್ಟ್ ಇಲ್ಲ
ಹೊರ ಜಿಲ್ಲೆಗಳನ್ನು ಸಂಪರ್ಕಿಸುವ ವಿವಿಧೆಡೆ ಕರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ತೇರದಾಳದಿಂದ ಹಾರೂಗೇರಿ ಮೂಲಕ ಬೆಳಗಾವಿ ಜಿಲ್ಲೆ ಮತ್ತು ಮಿರಜ, ಸಾಂಗಲಿ, ಪುಣೆಯಿಂದ ಜಿಲ್ಲೆಗೆ ಪ್ರವೇಶಿಸುವ ನಗರದ ಹೆದ್ದಾರಿಯಲ್ಲಿ ಚೆಕ್ಪೋಸ್ಟ್ ಅಳವಡಿಸಲಾಗಿಲ್ಲ. ಹೀಗಾಗಿ ನೆರೆ ರಾಜ್ಯದಿಂದ ರೋಗ ಪೀಡಿತ ಜನರು ಬಂದರೇ ಹೇಗೆ? ಎಂದು ಸಾರ್ವಜನಿಕರು ಭಯಪಡುತ್ತಿದ್ದಾರೆ. ಇನ್ನಾದರೂ ಚೆಕ್ಪೋಸ್ಟ್ ಮೂಲಕ ರೋಗಿಗಳ ಪರಿಶೀಲನೆ ಮಾಡುವ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಚೆಕ್ಪೋಸ್ಟ್ ಮಾಡುವಂತೆ ಮೇಲಧಿಕಾರಿಗಳಿಂದ ಯಾವುದೇ ಆದೇಶ ಬಂದಿಲ್ಲ. ನಮ್ಮ ಇಲಾಖೆಯಿಂದ ಚೆಕ್ಪೋಸ್ಟ್ ನಿರ್ಮಾಣವಾದರೂ ರೋಗ ಪರಿಶೀಲಿಸುವುದು ಸಮರ್ಪಕವಾಗುವುದಿಲ್ಲ. ಕೇವಲ ಜ್ವರ ಮಾತ್ರ ಪರಿಶೀಲಿಸುವ ಮಷಿನ್ ಹಲವೆಡೆ ಕಂಡುಬಂದಿದೆ.
– ಪಿ.ಎಸ್. ಚನಗೊಂಡ ತಹಸೀಲ್ದಾರ್ ರಬಕವಿ-ಬನಹಟ್ಟಿ
ಮಹಾರಾಷ್ಟ್ರ ಸೇರಿ ಪಕ್ಕದ ಬೆಳಗಾವಿ ಜಿಲ್ಲೆಯ ಜನರು ತೇರದಾಳ ಪ್ರವೇಶಿಸುತ್ತಾರೆ. ಕರೊನಾ ಭಾರಿ ಭೀತಿ ಹುಟ್ಟಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯಕ್ಕಾಗಿ ಚೆಕ್ ಪೋಸ್ಟ್ ನಿರ್ಮಾಣವಾಗಬೇಕು.
– ಗಿರೀಶ ಬಿಜ್ಜರಗಿ ತೇರದಾಳ