ಕೋಗಲೂರು: ಶಿವರಾತ್ರಿಯಲ್ಲಿ ಸಂಗ್ರಹವಾದ ಕಾಣಿಕೆ ಮೇಲೆ ಕಣ್ಣಿಟ್ಟಿರುವ ದುಷ್ಕರ್ಮಿಗಳು ಸೋಮವಾರ ರಾತ್ರಿ ಚನ್ನಗಿರಿ ತಾಲೂಕಿನ ಎರಡು ಗ್ರಾಮಗಳ ಈಶ್ವರ ದೇಗುಲಗಳ ಹುಂಡಿ ಒಡೆದಿದ್ದು, ಒಂದು ಕಡೆ ಕಳವಿನ ಯತ್ನ ನಡೆಸಿದ್ದಾರೆ.
ಸಂತೇಬೆನ್ನೂರು, ಆಲೂರು, ಚಿಕ್ಕಕೋಗಲೂರು ಗ್ರಾಮಗಳ ದೇಗುಲಗಳಲ್ಲಿ ಸರಣಿ ಕಳ್ಳತನ ಪ್ರಕರಣ ವರದಿಯಾಗಿದ್ದು, ಸಂತೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.
ಮಂಗಳವಾರ ಮುಂಜಾನೆ ಆಲೂರಿನ ಶ್ರೀ ಈಶ್ವರ ದೇಗುಲದ ಹುಂಡಿಯಲ್ಲಿದ್ದ ಹಣ, ದೇವಿ ಬಂಗಾರದ ತಾಳಿ, ಸಿಸಿಟಿವಿ ಮಾನಿಟರ್, ಡಿವಿಆರ್ ಬಾಕ್ಸ್ ಕಳವಾಗಿವೆ.
ಸ್ಥಳಕ್ಕೆ ಪಿಎಸ್ಐ ಶಿವರುದ್ರಪ್ಪ ಎಸ್.ಮೇಟಿ, ಡಾಗ್ ಸ್ಕ್ವಾಡ್ ಎಆರ್ ಎಸ್ಐ ವೀರಾಚಾರಿ, ಬೆರಳಚ್ಚು ಪಿಎಸ್ಐ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಬ್ಬಂದಿ ನಾಗರಾಜ್, ಧರ್ಮಪ್ಪ, ಕೊಟ್ರೇಶ್ ಇದ್ದರು.
ಸೋಮವಾರ ರಾತ್ರಿ ಸಂತೇಬೆನ್ನೂರಿನ ಈಶ್ವರ ದೇವಸ್ಥಾನದಲ್ಲಿ ಹುಂಡಿ ಹಣ ದೋಚಿದ್ದಾರೆ. ಅದೇ ರಾತ್ರಿ ಚಿಕ್ಕಕೋಗಲೂರಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ ನಡೆದಿದೆ ಎನ್ನಲಾಗಿದೆ.