ಖಾನಾಪುರ: ತಾಲೂಕಿನ ಮುಗಳಿಹಾಳ ಗ್ರಾಮದ ಕಲ್ಮೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 50 ಸಾವಿರ ರೂ. ಆರ್ಥಿಕ ಅನುದಾನ ಮಂಜೂರಾಗಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಪ್ರದೀಪ್.ಜಿ ಹೇಳಿದ್ಧಾರೆ.
ಗ್ರಾಮದ ಕಲ್ಮೇಶ್ವರ ದೇವಾಲಯದಲ್ಲಿ ಮಂಗಳವಾರ ದೇವಸ್ಥಾನ ವಿಶ್ವಸ್ಥ ಮಂಡಳಿಯ ಸದಸ್ಯರಿಗೆ ಅನುದಾನದ ಡಿಡಿ ಹಸ್ತಾಂತರಿಸಿ ಮಾತನಾಡಿದ ಅವರು, ಇದುವರೆಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗ್ರಾಮಸ್ಥರು ಕೈಗೊಂಡಿರುವ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು 60 ಲಕ್ಷ ರೂ. ಅಧಿಕ ಅನುದಾನ ವಿತರಿಸಿದ್ದಾರೆ ಎಂದರು.
ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಗಂಗಾಧರ ತುಳಜಿ ಮಾತನಾಡಿ, ಈ ಭಾಗದ ಜಾಗೃತ ದೇವಸ್ಥಾನ ಎಂದು ಬಿಂಬಿತವಾದ ಕಲ್ಮೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅನುದಾನ ನೀಡಿದ ಧರ್ಮಸ್ಥಳ ಯೋಜನೆಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಯೋಜನಾಧಿಕಾರಿ ರಿಯಾಜ್ ಅತ್ತಾರ್, ಮೇಲ್ವಿಚಾರಕ ಸಂತೋಷ ಗಂದಿಗವಾಡ, ಸೇವಾ ಪ್ರತಿನಿಧಿ ಸಿದ್ಧಪ್ಪ ಹಾಗೂ ಸ್ಥಳೀಯರು ಇದ್ದರು.