ಹೊನ್ನಾವರ: ಬೇಸಿಗೆಯ ಬಿಸಿಲಿನ ಹೊಡೆತಕ್ಕೆ ಅಡಕೆ ತೋಟ ಮತ್ತು ಕೃಷಿ ಬೆಳೆಗಳಿಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ. ಈ ಸಲ ಹಿಂದೆಂದೂ ಕಾಣದಷ್ಟು ತಾಪಮಾನ ಹೆಚ್ಚಿದೆ.
ತಾಲೂಕಿನ ಗ್ರಾಮೀಣ ಪ್ರದೇಶದ ಬಹುತೇಕ ರೈತರು ವಾಣಿಜ್ಯ ಬೆಳೆಗಳಾದ ತೆಂಗು, ಅಡಕೆ ಬೆಳೆಯನ್ನೇ ನೆಚ್ಚಿಕೊಂಡಿದ್ದಾರೆ. ನೀರು, ಗೊಬ್ಬರ ಹಾಕಿ ಬೆಳೆ ಬೆಳೆಯುತ್ತಿದ್ದಾರೆ. ಆದರೆ, ಮೇ ತಿಂಗಳು ಮುಗಿಯುತ್ತ ಬಂದರೂ ಮಳೆ ಬಾರದೆ ಇರುವುದರಿಂದ ಸಾವಿರಾರು ಎಕರೆ ಅಡಕೆ ತೋಟ ಒಣಗುತ್ತಿದೆ.
ಬಾವಿಯಲ್ಲಿ ನೀರಿಲ್ಲ
ತಾಲೂಕಿನ ಹಲವು ಭಾಗಗಳಲ್ಲಿನ ರೈತರು ಕೊಳವೆ ಬಾವಿಯನ್ನು ನಂಬಿ ಕೃಷಿ ಮಾಡುತ್ತಾರೆ. ಅನೇಕ ಕೊಳವೆ ಬಾವಿಗಳು ಈ ಬಾರಿ ನೀರಿಲ್ಲದೆ ಬರಿದಾಗಿವೆ. ಕಳೆದ 3-4 ವರ್ಷಗಳ ಕಾಲ ಜಿಲ್ಲೆಯಲ್ಲಿ ಮಾರ್ಚ್ವರೆಗೂ ಮಳೆಯಾಗಿದೆ. ನಂತರದಲ್ಲಿ ಆಗಾಗ ಮಳೆಯಾಗಿ ಭೂಮಿ ತೇವವಾಗಿ ಇರುತ್ತಿತ್ತು. ಆದರೆ, ಈ ಬಾರಿ ದೀಪಾವಳಿ ವೇಳೆಯಲ್ಲಿಯೇ ಮಳೆ ಕೈ ಕೊಟ್ಟಿದ್ದರಿಂದ ನೀರಿನ ಬರ ಎಲ್ಲೆಡೆ ಕಾಡುತ್ತಿದೆ. ಹೊನ್ನಾವರ ತಾಲೂಕಿನ ಚಿಕ್ಕನಕೋಡ, ಹಿರೇಬೈಲ, ಗೇರುಸೊಪ್ಪ, ಚಂದಾವರ, ಹೊದ್ಕೆ, ಶಿರೂರು, ಮಂಕಿ, ಮಾಗೋಡ ಸೇರಿ ಹಲವು ಗ್ರಾಮಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದಾಗಿ ತಮ್ಮ ಭೂಮಿಗೆ ನೀರುಣಿಸಲು ರೈತರು ಪರದಾಡುತ್ತಿದ್ದಾರೆ.
ನೀರಿನ ಕೊರತೆಯಿಂದ ಅಡಕೆ ತೋಟಗಳು ಒಣಗಿ ಸಾಯುತ್ತಿವೆ. ಕೊಳವೆ ಬಾವಿಗಳಲ್ಲಿ ನೀರು ಮಾಯವಾಗಿದೆ. ಮಳೆ ಬಾರದೆ ಹೋದರೆ ದೊಡ್ಡ ಪ್ರಮಾಣದಲ್ಲಿ ಬೆಳೆ ಹಾನಿಯಾಗುತ್ತದೆ. ಮಳೆಗಾಗಿ ಕಾಯುತ್ತಿದ್ದೇವೆ.
— ಗಜಾನನ ಶಾನಭಾಗ, ಪ್ರಗತಿಪರ ಕೃಷಿಕ