ತೀರ್ಥಹಳ್ಳಿ: ಬಡವರು, ಕೂಲಿ ಕಾರ್ಮಿಕರ ಮಕ್ಕಳು ಕೂಡ ವಿದ್ಯಾವಂತರಾಗಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಆಶಯ ವ್ಯಕ್ತಪಡಿಸಿದರು.
ತಾಲೂಕಿನ ಗುಡ್ಡೇಕೊಪ್ಪ ಸರ್ಕಾರಿ ಪ್ರೌಡಶಾಲೆಯಲ್ಲಿ 16 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕೊಠಡಿಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ನನ್ನೂರಿನ ಈ ಶಾಲೆಗೆ ಆಂಗ್ಲ ಮಾಧ್ಯಮವನ್ನು ಮಂಜೂರು ಮಾಡಿಸಿರುವುದಲ್ಲದೇ ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿರುವ ಸ್ಮಾರ್ಟ್ಕ್ಲಾಸ್ ಮುಂತಾದ ಸವಲತ್ತುಗಳನ್ನು ಒದಗಿಸಿದ್ದೇನೆ. ಇಂತಹ ಶಾಲೆಯ ವಿದ್ಯಾರ್ಥಿಗಳ ಸಾಧನೆಯಿಂದ ಜನಪ್ರತಿನಿಧಿಗಳಾದ ನಮ್ಮಲ್ಲಿ ಸಾರ್ಥಕತೆಯ ಭಾವನೆಯೂ ಮೂಡುತ್ತದೆ ಎಂದರು.
ಲಕ್ಷಾಂತರ ರೂ. ಡೊನೇಷನ್ ಕೊಟ್ಟು ಶಿಕ್ಷಣ ಪಡೆಯಲಾಗದ ಬಡವರು, ಕೂಲಿ ಕಾರ್ಮಿಕರ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಲು ಸರ್ಕಾರಿ ಶಾಲೆಗಳ ಅಭಿವೃದ್ಧಿ ಅತಿ ಮುಖ್ಯವಾಗಿದೆ. ಶಾಲೆಗಳಲ್ಲಿ ಸೌಲಭ್ಯಗಳು ಎಷ್ಟೇ ಆಧುನಿಕವಾಗಿದ್ದರೂ ಕಲಿಸುವ ಗುರುಗಳಲ್ಲಿ ಬದ್ಧತೆ ಕೂಡ ಇರಬೇಕು. ಈ ಹಿನ್ನೆಲೆಯಲ್ಲಿ ಈ ಶಾಲೆಯ ಫಲಿತಾಂಶ ತೃಪ್ತಿ ತಂದಿದೆ ಎಂದು ಹೇಳಿದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುರೇಶ್, ಗುಡ್ಡೇಕೊಪ್ಪ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಪವಾರ್, ತಾಪಂ ಮಾಜಿ ಸದಸ್ಯ ಟಿ.ಮಂಜುನಾಥ್, ಗಿರಿಯಪ್ಪ ಗೌಡ, ರಾಜು, ಸುಮಾ ಇದ್ದರು.