ತಾವರಗೇರಾ: ಓಡಾಡಲು ರಸ್ತೆ, ಜ್ಞಾನಾರ್ಜನೆಗೆ ಶಾಲೆ, ಕುಡಿಯಲು ಶುದ್ಧ ನೀರು, ಸಂಚಾರಕ್ಕೆ ಸಾರಿಗೆ ಸೌಕರ್ಯವಿಲ್ಲದ ತಾಯಮ್ಮ ಕ್ಯಾಂಪ್ನ ಜನರು ಸಮಸ್ಯೆಗಳಿಂದ ತತ್ತರಿಸಿ ಹೋಗಿದ್ದು, ಪರಿಹಾರ ಸಿಗುವುದೇ ಯಕ್ಷ ಪ್ರಶ್ನೆಯಾಗಿದೆ.
ತಾಯಮ್ಮ ಕ್ಯಾಂಪ್ ಸಂಗನಾಳ ಗ್ರಾಮ ಪಂಚಾಯಿತಿಗೆ ಒಳಪಡುತ್ತದೆ. ಇಲ್ಲಿನ 18 ರಿಂದ 20 ಮನೆಗಳಲ್ಲಿ 35 ರಿಂದ 40 ಕುಟುಂಬಗಳು ಹತ್ತಾರು ವರ್ಷಗಳಿಂದ ವಾಸಿಸುತ್ತಿವೆ. ಇವರು ಸತ್ತಲಿನ ಗಂಗನಾಳ, ಸಂಗನಾಳ, ಕನ್ನಾಳ, ತೆಮ್ಮಿನಾಳ ಗ್ರಾಮದವರಾಗಿದ್ದು, ಜಮೀನುಗಳಿಗಾಗಿ ಕ್ಯಾಂಪ್ನಲ್ಲಿ ಬದುಕು ಸಾಗಿಸುತ್ತಿದ್ದಾರೆ.
ಬೋರ್ವೆಲ್ನಲ್ಲಿ ನೀರಿಲ್ಲ
ಕಳೆದ ಚುನಾವಣೆಗೂ ಮುಂಚೆ ಒಂದು ಬೋರ್ವೆಲ್ ಹಾಕಿಸಲಾಗಿತ್ತು. ಇದನ್ನೇ ಜನರು ನೆಚ್ಚಿಕೊಂಡಿದ್ದರು. ಸದ್ಯ ಕೊಳವೆ ಬಾವಿಯಲ್ಲಿ ನೀರು ಸರಿಯಾಗಿ ಬಾರದೆ ಜಲ ಸಮಸ್ಯೆ ಎದುರಾಗಿದ್ದು, ಜಮೀನಿನಲ್ಲಿಯ ಕೊಳವೆಬಾವಿಯಿಂದ ನೀರು ತರುವ ಸ್ಥಿತಿ ಉದ್ಬವವಾಗಿದೆ.
ತೆರೆದ ಕೊಳವೆಯಿಂದ ಅಪಾಯ
ಕಳೆದೆರಡು ವರ್ಷಗಳ ಹಿಂದೆ ಕೊರೆಸಿದ್ದ ಕೊಳವೆ ಬಾವಿಯಲ್ಲಿ ನೀರು ಬೀಳದಿದ್ದರೂ ಅದನ್ನು ಮುಚ್ಚುವ ಗೋಜಿಗೆ ಹೋಗಿಲ್ಲ. ಇದರ ಸಮೀಪವೇ ಅಂಗನವಾಡಿ ಕೇಂದ್ರವಿದ್ದು, ಚಿಕ್ಕ ಮಕ್ಕಳು ಕೊಳವೆ ಬಾವಿಯೊಳಗೆ ಬೀಳುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ಈ ಬಗ್ಗೆ ಪಂಚಾಯಿತಿ ಅವರು ಕ್ರಮ ಕೈಗೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಹತ್ತಾರು ವರ್ಷಗಳಿಂದ ಕ್ಯಾಂಪ್ನಲ್ಲಿ ವಾಸಿಸಲಾಗುತ್ತಿದೆ. ಈಗ ನೀರಿನ ಸಮಸ್ಯೆಯಿಂದ ಸಂಕಷ್ಟ ಎದುರಾಗಿದೆ. ವಿದ್ಯಾಭ್ಯಾಸಕ್ಕಾಗಿ ಮಕ್ಕಳು ಗಂಗನಾಳ, ಸಂಗನಾಳದ ಸರ್ಕಾರಿ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾರೆ. ಕ್ಯಾಂಪ್ನಲ್ಲಿ ಶಾಲೆ ಸ್ಥಾಪಿಪನೆ ಜತೆಗೆ ಅಗತ್ಯ ಸೌಕರ್ಯ ಒದಗಿಸಬೇಕೆಬುದು ಕ್ಯಾಂಪ್ ನಿವಾಸಿಗಳ ಒತ್ತಾಸೆಯಾಗಿದೆ.
ತಾಯಮ್ಮ ಕ್ಯಾಂಪಿನಲ್ಲಿ ಪ್ರಾಥಮಿಕ ಶಾಲೆ ಆರಂಭಿಸಲು ಬಿಇಒ ಜತೆಗೆ ಚರ್ಚಿಸಲಾಗುವುದು. ಅಲ್ಲದೆ ಮೂಲ ಸೌಕರ್ಯಗಳನ್ನು ಹಂತ ಹಂತವಾಗಿ ಒದಗಿಸಲಾಗುವುದು.
| ದೊಡ್ಡನಗೌಡ ಪಾಟೀಲ, ಶಾಸಕ ಕುಷ್ಟಗಿಕ್ಯಾಂಪ್ನಲ್ಲಿ ಮೂಲ ಸೌಕರ್ಯ ಮರೀಚಿಕೆಯಾಗಿದೆ. ಸರ್ಕಾರ ಸಮಸ್ಯೆಗಳನ್ನು ಪರಿಹಾರ ಮಾಡಬೇಕು. ಮುಖ್ಯವಾಗಿ ಶಾಲೆ, ರಸ್ತೆ ನಿರ್ಮಾಣ ಮಾಡಬೇಕು.
| ಮುದುಕಪ್ಪ ತೆಮ್ಮಿನಾಳ, ತಾಯಮ್ಮ ಕ್ಯಾಂಪ್ ನಿವಾಸಿಅಂಗನವಾಡಿ ಕೇಂದ್ರದ ಬಳಿ ಕೊಳವೆ ಬಾವಿ ಕೊರೆಸಿ ಹಾಗೇ ಬಿಡಲಾಗಿದೆ. ಬೋರ್ವೆಲ್ ಮೇಲೆ ಕಲ್ಲು ಮುಚ್ಚಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿದೆ. ಕೂಡಲೇ ಶಾಶ್ವತವಾಗಿ ಮುಚ್ಚಲು ಕ್ರಮ ಕೈಗೊಳ್ಳಬೇಕು.
| ರೈತ ಭೀಮಣ್ಣ, ತಾಯಮ್ಮ ಕ್ಯಾಂಪ್ ನಿವಾಸಿ