ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಧಾರ್ಮಿಕ ವಿಧಿವಿಧಾನಗಳು ಅರಂಭಗೊಂಡಿವೆ. ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಭಕ್ತರು ಕಾತುರದಿಂದ ಕಾಯುತ್ತಿದ್ದು, ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ.
ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ರಾಷ್ಟ್ರೀಯ ಸ್ವಯಂ ಸೇವಕ (ಆರ್ಎಸ್ ಎಸ್) ನೇತೃತ್ವದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗ ದಳ ಸೇರಿ ವಿವಿಧ ಹಿಂದುಪರ ಸಂಘಟನೆಗಳು, ಬಿಜೆಪಿಯ ಸಾವಿರಾರು ಕಾರ್ಯಕರ್ತರು ನಗರ, ಗ್ರಾಮೀಣ ಭಾಗದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.
ಇತ್ತ ಕುಂದಾನಗರಿ ಬೆಳಗಾವಿಯಲ್ಲಿ ರಾಮಮಂದಿರ ಉದ್ಘಾಟನೆಯ ಭರಾಟೆ ತುಸು ಜೋರು ಎಂದೇ ಹೇಳಲಾಗಿದ್ದು, ಜನರು ಟ್ಯಾಟೂ ಹಾಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ಪಾಟೀಲ್ ಆರಂಭಿಸಿರುವ ಉಚಿತ ಶ್ರೀರಾಮಚಂದ್ರನ ಟ್ಯಾಟೂ ಅಭಿಯಾನಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತ್ತಿದ್ದು, ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿರುವ ಮೂರು ಟ್ಯಾಟೂ ಅಂಗಡಿಗಳ ಮುಂಭಾಗ ಸಾಲಿನಲ್ಲಿ ನಿಂತು ತಮ್ಮ ಕೈಗಳ ಮೇಲೆ ಶ್ರೀರಾಮನ ಭಾವಚಿತ್ರವನ್ನು ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ.
ಕನ್ನಡ, ಹಿಂದಿ, ಮರಾಠಿ ಬರಹದೊಂದಿಗೆ ರಾಮನ ಟ್ಯಾಟೂ ಹಾಕಲಾಗುತ್ತಿದೆ. ಇಲ್ಲಿಯವರೆಗೆ ನಗರದಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಜನರು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಸುಮಾರು 500ಕ್ಕೂ ಅಧಿಕ ಟ್ಯಾಟೂ ಕಲಾವಿದರು ಬೆಳಗಾವಿ ನಗರಕ್ಕೆ ಆಗಮಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ರಾಜ್ಯಾದ್ಯಂತ ಶ್ರೀರಾಮನ ಭಾವಚಿತ್ರ ಒಳಗೊಂಡಿರುವ ಕೇಸರಿ ಬಾವುಟಗಳು, ಕೇಸರಿ ಬಟ್ಟೆಗಳು, ಧ್ವಜಗಳು ನಿರೀಕ್ಷೆ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಈ ಮೂಲಕ ವ್ಯಾಪಾರಿಗಳು ಪರೋಕ್ಷವಾಗಿ ಶ್ರೀರಾಮನಿಗೆ ಭಕ್ತಿ ಅರ್ಪಣೆ ಮಾಡುತ್ತಿದ್ದಾರೆ. ಭಾನುವಾರ ಹಾಗೂ ಸೋಮವಾರ ಹೆಚ್ಚಿನ ವ್ಯಾಪಾರ ವಹಿವಾಟು ಆಗುವ ನಿರೀಕ್ಷೆಯಿದೆ.
ಬೆನ್ನಿನ ಮೇಲೆ ಶ್ರೀರಾಮನ ಚಿತ್ತಾರ: ಶ್ರೀರಾಮನ ಮೇಲಿನ ಭಕ್ತಿಯನ್ನು ಜನರು ಹಲವು ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಬೆಳಗಾವಿಯಲ್ಲಿ ಸುನೀಲ್ ಎಂಬುವವರು ಬೆನ್ನಿನ ಮೇಲೆ ಶ್ರೀರಾಮನ ದೊಡ್ಡ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಭಕ್ತಿ ಮೆರೆದಿದ್ದಾರೆ. ಸ್ನೇಹಲ್ ಚೌಧರಿ, ಅಕ್ಷಯ ಫವಲೆ ಎಂಬ ಕಲಾವಿದರು ಈ ಟ್ಯಾಟೂ ಹಾಕಿದ್ದು, ಸುಮಾರು 30 ಘಂಟೆ ಸಮಯವನ್ನು ತೆಗೆದುಕೊಂಡಿದ್ದಾರೆ. ಇದೊಂದು ದಾಖಲೆಯಾಗಿದ್ದು, ಹಚ್ಚೆ ಹಾಕಿಸಿಕೊಳ್ಳುವವನಗಿಂತ ಟ್ಯಾಟೂ ಹಾಕುವವರಿಗೆ ಸುಸ್ತಾಗಿದೆ. ಶ್ರೀರಾಮಮೂರ್ತಿ ಪ್ರಾಣ ಪ್ರತಿಷ್ಠಾಪನೆ ದಿನದ ಸವಿ ನೆನಪಿಗಾಗಿ ಟ್ಯಾಟೂ ಹಾಕಿಸಿಕೊಂಡಿರುವ ಯುವಕನ ಭಕ್ತಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.