ಚಿಕ್ಕಮಗಳೂರು: ಕರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ಮಾರ್ಗಸೂಚಿಯನ್ನು ಸರ್ಕಾರ ಬದಲಾವಣೆ ಮಾಡುವ ಚಿಂತನೆ ನಡೆಸಿದ್ದು, ರಾಜ್ಯಮಟ್ಟದ ಟಾಸ್ಕ್ಫೋರ್ಸ್ ಸಮಿತಿ ಈ ಬಗ್ಗೆ ರ್ಚಚಿಸಿ ನಿರ್ಧರಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ತಿಳಿಸಿದರು.
ಶವದ ಮುಖ ನೋಡುವುದರಿಂದ ಕರೊನಾ ಬರುವುದಿಲ್ಲ. ಅದಕ್ಕೆ ಅವಕಾಶ ನೀಡದಿರುವುದು ಮಾನವೀಯತೆ ಅಲ್ಲ. ನ್ಯಾಯಾಲಯವೂ ಈ ಬಗ್ಗೆ ನಿರ್ದೇಶನ ನೀಡಿದೆ. ಸದ್ಯ ಐಸಿಎಂಆರ್ ಮತ್ತು ಡಬ್ಲ್ಯುಎಚ್ಒ ಮಾರ್ಗಸೂಚಿ ಜಾರಿಯಲ್ಲಿದೆ. ಈ ಕಠಿಣ ಕ್ರಮ ಬದಲಾಗುವ ಅಗತ್ಯವಿದೆ. ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆ ಮಾತುಕತೆ ನಡೆಸಲಾಗಿದೆ ಎಂದು ಶನಿವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಈ ಹಿಂದೆ ತೀರ್ವನಿಸಿದಂತೆ ಕರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ತಂಡ ರಚಿಸಲಾಗಿದೆ. ಶವ ಪಡೆಯಲು ಯಾರೂ ಮುಂದಾಗದಿದ್ದರೆ ಅಂತಹ ಶವಗಳಿಗೆ ನಮ್ಮ ತಂಡವೇ ಅಂತ್ಯಕ್ರಿಯೆ ನಡೆಸಲಿದೆ. ಕರೊನಾ ಸೋಂಕಿತ ಮಹಿಳೆಯ ಶವ ಸಂಸ್ಕಾರಕ್ಕೆ ಚಿತಾಗಾರದಲ್ಲಿ ಹಣ ವಸೂಲು ಮಾಡಲಾಗಿದೆ ಎಂಬ ದೂರಿಗೆ ವಿವರಣೆ ನೀಡಿದ ಅವರು, ಚಿತಾಗಾರದ ನಿರ್ವಹಣಾ ವೆಚ್ಚಕ್ಕೆ ಸಂಬಂಧಿಸಿ ಅಲ್ಲಿನ ಸಿಬ್ಬಂದಿ ಶುಲ್ಕ ವಸೂಲು ಮಾಡಿರಬಹುದು. ಇನ್ನು ಮುಂದೆ ಕರೊನಾ ಪ್ರಕರಣಗಳಲ್ಲಿ ಶುಲ್ಕ ರದ್ದುಪಡಿಸಲು ಚಿಂತನೆ ಮಾಡುವುದಾಗಿ ಹೇಳಿದರು.