ಡೊಡೊಮಾ (ತಾಂಜಾನಿಯಾ): ಅದೃಷ್ಟವೆಂಬುದು ಯಾವಾಗ? ಯಾರಿಗೆ? ಯಾವ ರೀತಿಯಲ್ಲಿ ಬರುತ್ತದೆ ಎಂಬುದು ಗೊತ್ತಾಗುವುದಿಲ್ಲ. ಆದರೆ, ಒಮ್ಮೆ ಅದೃಷ್ಟ ದೇವತೆ ಮನೆ ಪ್ರವೇಶಿಸಿದರೆ ಸಾಕು ಆತನ ಬದುಕೇ ಬಂಗಾರವಾಗಿಬಿಡುತ್ತದೆ ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದೆ. ಒಂದು ಬಾರಿಯಲ್ಲ, ಎರಡು ಬಾರಿ ಈತನ ಮನೆ ಬಾಗಿಲಿಗೆ ಅದೃಷ್ಟ ಹುಡುಕಿಕೊಂಡು ಬಂದಿದೆ.
ಹೌದು, ಹಿಂದೊಮ್ಮೆ ತಾಂಜಾನಿಯಾ ಸರ್ಕಾರವು ಗಣಿ ಕೆಲಸಗಾರನ ಮನೆಗೆ ಬರೋಬ್ಬರಿ 7.74 ಬಿಲಿಯನ್ ತಾಂಜಾನಿಯನ್ ಕರೆನ್ಸಿ ಶಿಲ್ಲಿಂಗ್ಸ್ ಚೆಕ್ ಅನ್ನು ಕಳುಹಿಸಿಕೊಟ್ಟಿತ್ತು. ಡಾಲರ್ ರೂಪದಲ್ಲಿ ಅದರ ಮೌಲ್ಯ 3.35 ಮಿಲಿಯನ್ ಆಗಿದ್ದು, ಭಾರತೀಯ ಕರೆನ್ಸಿಗೆ ಹೋಲಿಸಿದರೆ, ಬರೋಬ್ಬರಿ 25 ಕೋಟಿಗೂ ಅಧಿಕವಾಗಿದೆ. ಖಚಿತವಾಗಿ ಹೇಳಬೇಕೆಂದರೆ ಚೆಕ್ನ ಮೌಲ್ಯ 25,30,35,717 ರೂ. ಆಗಿದೆ.
ಇದನ್ನೂ ಓದಿ: ಜನರ ತಲೆಗೆ ಹುಳ ಬಿಟ್ಟ ಈ ಜೀವಿ ಯಾವುದು ಗುರುತಿಸುವಿರಾ?: 15 ಅಡಿ ಉದ್ದ, ಎಲ್ಲವೂ ನಿಗೂಢ!
ಇದೀಗ ಅದೇ ಗಣಿಕೆಲಸಗಾರನಿಗೆ ಮತ್ತೊಮ್ಮೆ ಜಾಕ್ಪಾಟ್ ಹೊಡೆದಿದ್ದು, 15 ಕೋಟಿಗೂ ಅಧಿಕ ಹಣ ಆತನನ್ನು ಅರಸಿ ಬಂದಿದೆ. ಗಣಿಕೆಲಸಗಾರನನ್ನು ನೋಡಿದವರು ಎಂಥಾ ಅದೃಷ್ಟನಪ್ಪಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಅಷ್ಟಕ್ಕೂ ಕೋಟಿ ಹಣ ಬಂದಿದ್ಹೇಗೆ?
ಈ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡುವುದು ಸಾಮಾನ್ಯ. ಅದಕ್ಕೆ ಉತ್ತರ ಮುಂದಿದೆ. ಬೆಲೆ ಬಾಳುವ ರತ್ನದ ಕಲ್ಲುಗಳಿಂದಲೇ ತುಂಬಿರುವ ಹಾಗೂ ಗಡಿಯಾಚೆಗಿನ ಕಳ್ಳಸಾಗಣೆಯನ್ನು ನಿಯಂತ್ರಿಸಲು ಗೋಡೆಯಿಂದ ಸುತ್ತುವರೆದಿರುವ ತಾಂಜಾನಿಯಾ ದೇಶದ ಉತ್ತರ ಭಾಗದಲ್ಲಿರುವ ತಾಂಜಾನೈಟ್ ಗಣಿಗಳಲ್ಲಿ ಸಾನಿನ್ಯು ಲೈಜರ್ ಎಂಬ ಗಣಿಕೆಲಸಗಾರ ಕಳೆದ ಜೂನ್ನಲ್ಲಿ ತೋಳಿನ ಗಾತ್ರದ ಎರಡು ಕಡು ನೇರಳೆ ಹಾಗೂ ನೀಲಿ ಬಣ್ಣ ಮಿಶ್ರಿತ ರತ್ನದ ಕಲ್ಲುಗಳನ್ನು ಪತ್ತೆಹಚ್ಚಿದ್ದರು.
ಮೊದಲನೇ ರತ್ನದ ಕಲ್ಲು 9.27 ಕೆ.ಜಿ ತೂಗಿದರೆ, ಎರಡನೆಯದು 5.103 ಕೆ. ಜಿ. ಇತ್ತೆಂದು ತಾಂಜಾನಿಯಾದ ಗಣಿಗಾರಿಕೆ ಸಚಿವಾಲಯ ತಿಳಿಸಿತ್ತು. ಅಂದಹಾಗೆ ತಾಂಜಾನೈಟ್ ಎಂಬುದು ಪೂರ್ವ ಆಫ್ರಿಕಾ ರಾಷ್ಟ್ರದ ಸಣ್ಣ ಉತ್ತರ ಪ್ರದೇಶದಲ್ಲಿ ಮಾತ್ರ ಕಂಡುಬರುವ ರತ್ನದ ಕಲ್ಲಾಗಿದೆ. ಮಿರೆರಾನಿಯಲ್ಲಿ ಗಣಿಗಾರಿಕೆ ಚಟುವಟಿಕೆ ಆರಂಭಿಸಿದಾಗಿನಿಂದ ಇತಿಹಾಸದಲ್ಲಿ ಮೊದಲ ಬಾರಿಗೆ ಎರಡು ಬಹುದೊಡ್ಡ ತಾಂಜಾನೈಟ್ ರತ್ನದ ಕಲ್ಲುಗಳು ಪತ್ತೆಯಾಗಿವೆ ಎಂದು ಗಣಿ ಸಚಿವಾಲಯದ ಖಾಯಂ ಕಾರ್ಯದರ್ಶಿ ಸೈಮನ್ ಎಂಸಾಂಜಿಲಾ ಅವರು ತಾಂಜಾನಿಯಾದ ಉತ್ತರ ಮನ್ಯಾರಾ ಪ್ರದೇಶದ ಸಿಮಾಂಜಿರೋ ಜಿಲ್ಲೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ತಿಳಿಸಿದ್ದರು.
ಇದನ್ನೂ ಓದಿ: ಬಲಿಪೀಠದಿಂದ ತಪ್ಪಿಸಿಕೊಂಡ ಬೆಕ್ಕು, ಆ ತಪ್ಪಿಗೆ ಮಗುವನ್ನೇ ಬಲಿ ಕೊಡಿ ಎಂದ ಭೂಪ
ಮತ್ತೆ ಹೊಡೆಯಿತು ಬಂಪರ್!
ಈ ಹಿಂದೆ ಪತ್ತೆಯಾಗಿದ್ದ ರತ್ನದ ಕಲ್ಲುಗಳನ್ನು ಬ್ಯಾಂಕ್ ಆಫ್ ತಾಂಜಾನಿಯಾ ಖರೀದಿಸಿತ್ತು. ಇದೀಗ ಮತ್ತೊಂದು ರತ್ನದ ಕಲ್ಲು ಪತ್ತೆಯಾಗಿದ್ದು, ಮೂರನೇ ಅಪರೂಪದ ಕಲ್ಲು ಎಂದು ಹೇಳಲಾಗಿದೆ. ಇದು ಸುಮಾರು 6 ಕೆ.ಜಿ ತೂಕವಿದ್ದು, ಬರೋಬ್ಬರಿ 2 ಮಿಲಿಯನ್ ಡಾಲರ್ಗೆ ಮಾರಾಟ ಮಾಡಲಾಗಿದೆ. ಇದರ ಭಾರತೀಯ ಕರೆನ್ಸಿ ಮೌಲ್ಯ 150,391,932 ರೂ. ಆಗಿದೆ.
ಮಾನವೀಯತೆ ಮೆರೆದ ಗಣಿಕೆಲಸಗಾರ
ಆಫ್ರಿಕಾ ಮಾಧ್ಯಮಗಳ ಪ್ರಕಾರ ಗಣಿಕೆಲಸಗಾರ ಬಂದಂತಹ ಹಣವನ್ನು ಈಗಾಗಲೇ ತಮ್ಮ ಸಮುದಾಯದ ಏಳಿಗೆಗೆ ಬಳಸಿಕೊಳ್ಳುತ್ತಿದ್ದಾರೆ. ಸದ್ಯ ಎರಡು ಶಾಲೆಗಳನ್ನು ನಿರ್ಮಿಸಿ, ಮಕ್ಕಳ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ತಾನೂ ಕೋಟ್ಯಾಧೀಶ್ವರನಾದರೂ ತನ್ನ ಹಿಂದಿನ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವುದಿಲ್ಲ ಎನ್ನುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. (ಏಜೆನ್ಸೀಸ್)
ಬಂದ್ರೆ ಬರಬೇಕು ಇಂಥಾ ಅದೃಷ್ಟ: ರಾತ್ರೋರಾತ್ರಿ 25 ಕೋಟಿ ರೂ. ಒಡೆಯನಾದ ಗಣಿಕೆಲಸಗಾರ!