ತಾಳಿಕೋಟೆ: ವಿದೇಶ ಸಂಸ್ಕೃತಿ ತೊರೆದು ದೇಶದ ಸಂಸ್ಕೃತಿ ಬಿಂಬಿಸುವತ್ತ ಸಾಗಿರುವ ತಾಳಿಕೋಟೆಯ ಬಾಲಭಾರತಿ ವಿದ್ಯಾಮಂದಿರದಲ್ಲಿ ವಿದ್ಯೆ ನೀಡುವ ಸೇವಾ ಕಾರ್ಯ ಮಹತ್ವದ್ದಾಗಿದೆ ಎಂದು ಶಾಸಕ ಎ.ಎಸ್. ಪಾಟೀಲ(ನಡಹಳ್ಳಿ) ಹೇಳಿದರು.
ಪಟ್ಟಣದ ವಿದ್ಯಾಭಾರತಿ ಪ್ರೌಢಶಾಲೆಯಲ್ಲಿ ಶನಿವಾರ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
25 ವರ್ಷಗಳ ಹಿಂದೆ ಸ್ಥಾಪಿತವಾದ ವಿದ್ಯಾಭಾರತಿ ಪ್ರೌಢಶಾಲೆ ಈಗ ಬೆಳ್ಳಿ ಹಬ್ಬ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಬಾಲಭಾರತಿ ವಿದ್ಯಾ ಸಂಸ್ಥೆ 1980ರಲ್ಲಿ ಜನ್ಮತಾಳಿದಾಗ ಹಿರಿಯ ವಿಠ್ಠಲಸಿಂಗ್ ಹಜೇರಿ, ಸುಬ್ಬಯ್ಯ ಹೆಬಸೂರ, ಕೆ.ಡಿ. ಪಾಟೀಲ, ರತನಲಾಲ್ ಅಗರವಾಲಾ ಅವರನ್ನೊಳಗೊಂಡ ತಂಡ ಅದರ ಅಭಿವೃದ್ಧಿಗೆ ಶ್ರಮಿಸಿದರು. ಈಗ ವಿದ್ಯಾಭಾರತಿ ಪ್ರೌಢಶಾಲೆ ಬೆಳ್ಳಿ ಹಬ್ಬ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ. ಸಂಸ್ಥೆ ಕಟ್ಟಡ ನಿರ್ಮಾಣಕ್ಕಾಗಿ 15 ಲಕ್ಷ ರೂ. ಸರ್ಕಾರದಿಂದ ಬಿಡುಗಡೆಗೊಳಿಸುವ ಭರವಸೆ ನೀಡಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಇಂದಿನ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಎಲ್ಲರೂ ಸಂತೋಷದಿಂದ ಭಾಗಿಯಾಗಿದ್ದೇವೆ. 25 ವರ್ಷಗಳಿಂದ ನಿರಂತರ ಸಮಾಜಕ್ಕೆ ಕೊಡುಗೆ ನೀಡಿದ ವಿದ್ಯಾಭಾರತಿ ಪ್ರೌಢಶಾಲೆ ಸೇವಾ ಕಾರ್ಯ ಮಹತ್ವದ್ದಾಗಿದೆ. ಸಂಸ್ಥೆಯ ಹಾಸ್ಟೆಲ್ ಕಟ್ಟಡಕ್ಕೆ ಕೈಲಾದ ಮಟ್ಟಿಗೆ ಸಂಸದರ ನಿಧಿಯಲ್ಲಿ ಹಣ ಮಂಜೂರು ಮಾಡುವುದಾಗಿ ತಿಳಿಸಿದರು.
ಶಾಸಕ ಸೋಮನಗೌಡ ಪಾಟೀಲ ಮಾತನಾಡಿ, ವಿದ್ಯಾಭಾರತಿ ಸಂಸ್ಥೆಯಲ್ಲಿ ಕಡುಬಡವರಿಗೆ ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡಲಾಗುತ್ತಿದೆ ಎಂಬುದನ್ನು ಕೇಳಿದ್ದೇನೆ. ನಾನು ಕೂಡ ಸಹಾಯ ಹಸ್ತ ಕಲ್ಪಿಸಲು ಸಿದ್ಧನಿದ್ದೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ವಿದ್ಯಾಭಾರತಿ ಬೆಂಗಳೂರು ಪ್ರಾಂತ ಸಂಘಟನಾ ಕಾರ್ಯದರ್ಶಿ ಜಿ.ಆರ್.ಜಗದೀಶ ಮಾತನಾಡಿದರು.
ಗುಂಡಕನಾಳ ಬೃಹನ್ಮಠದ ಶ್ರೀ ಗುರುಲಿಂಗ ಶಿವಾಚಾರ್ಯರು, ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದಾನಿಗಳನ್ನು ಸನ್ಮಾನಿಸಲಾಯಿತು. ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ. ಮುರುಘೇಶ ವಿರಕ್ತಮಠ, ಬಾಲಭಾರತಿ ವಿದ್ಯಾಮಂದಿರದ ಅಧ್ಯಕ್ಷ ವಿಠ್ಠಲಸಿಂಗ್ ಹಜೇರಿ, ಲಕ್ಷ್ಮಣ ನಿರಾಣಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್. ಪಾಟೀಲ(ಕೂಚಬಾಳ), ಕ್ಷೇತ್ರ ಸಮನ್ವಯ ಅಧಿಕಾರಿ ಶೀಕಳವಾಡಿ, ಚಂದ್ರಶೇಖರ ಕವಟಗಿ, ಎಸ್.ಸಿ. ಸಲಬಣ್ಣವರ, ಆರ್ಎಸ್ಎಸ್ ಪ್ರಾಂತ ಭೌದ್ಧಿಕ ಪ್ರಮುಖ ಕೃಷ್ಣಾ ಜೋಶಿ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ. ಗಾಂಜಿ, ಬಿ.ಎಸ್. ಪಾಟೀಲ(ಯಾಳಗಿ), ಡಾ. ವಿಜಯಕುಮಾರ ಕಾರ್ಚಿ, ಕಾಶಿನಾಥ ಸಜ್ಜನ, ಎಚ್.ಎಸ್. ಪಾಟೀಲ, ಎಸ್.ಎಂ. ಸಜ್ಜನ, ಸಿದ್ದನಗೌಡ ಮಂಗಳೂರ, ಡಾ. ಆನಂದ ಭಟ್, ಸುಮಂಗಲಾ ಕೋಳೂರ ಮತ್ತಿತರರಿದ್ದರು.
ಚಿದಂಬರ ಭಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಹಣಮಂತ ಗುಳೇದ ವರದಿ ವಾಚಿಸಿದರು. ದಿನಕರ ಜೋಶಿ ಸ್ವಾಗತಿಸಿದರು. ಸಿ.ಎಂ. ಹಿರೇಮಠ ನಿರೂಪಿಸಿದರು. ವ್ಯವಸ್ಥಾಪಕ ಮಲ್ಲಿಕಾರ್ಜುನ ಹಿಪ್ಪರಗಿ ವಂದಿಸಿದರು.