ತಾಳಿಕೋಟೆ : ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವಿಗೆ ಸಹಕರಿಸಿದ ಮಹಿಳಾ ಪಿಎಸ್ಐಗೆ ಧನ್ಯವಾದ ಅರ್ಪಿಸಲಾಯಿತು ಎಂದು ಬರೆದು ಗ್ರಾಪಂ ಸದಸ್ಯನೋರ್ವ ಪಿಎಸ್ಐ ಅವರನ್ನು ಸನ್ಮಾನಿಸಿ ಸಿಹಿ ತಿನ್ನಿಸುತ್ತಿರುವ ಫೋಟೋವೊಂದನ್ನು ಪೋಸ್ಟ್ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪಿಎಸ್ಐ ಅವರು ಗೆಲುವಿಗೆ ಹೇಗೆ ಸಹಕರಿದ್ದಾರೆಂಬ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ.
ತಾಳಿಕೋಟೆ ಪೊಲೀಸ್ ಠಾಣೆ ಪಿಎಸ್ಐ ಗಂಗುಬಾಯಿ ಬಿರಾದಾರ ಅವರಿಗೆ ಬಳವಾಟ ಗ್ರಾಪಂ ಸದಸ್ಯ ಬಸನಗೌಡ ಸಾಸನೂರ ಅವರು ಪಿಎಸ್ಐ ಹಾಗೂ ಸಿಬ್ಬಂದಿಯೊಬ್ಬರಿಗೆ ಸನ್ಮಾನಿಸುವ ಹಾಗೂ ಸಿಹಿ ತಿನ್ನಿಸುತ್ತಿರು ಹಾಗೂ ಪಿಎಸ್ಐ ಗಂಗುಬಾಯಿ ಬಿರಾದಾರ ಅವರು ಪ್ರತಿಯಾಗಿ ಗ್ರಾಪಂ ಸದಸ್ಯನಿಗೆ ಸಿಹಿ ತಿನ್ನಿಸುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ. ಗ್ರಾಪಂ ಚುನಾವಣೆಯಲ್ಲಿ ಗೆಲುವಿಗೆ ಸಹಕರಿಸಿದ್ದಕ್ಕೆ ಸನ್ಮಾನ ಮಾಡಿ ಧನ್ಯವಾದ ತಿಳಿಸಲಾಯಿತೆಂಬ ಕೋಟ್ನ್ನು ಕೂಡ ಪೋಸ್ಟ್ ಜತೆ ಹಾಕಲಾಗಿದೆ. ಗ್ರಾಪಂ ಸದಸ್ಯ ಬಸನಗೌಡ ಸಾಸನೂರ ಅವರ ಸ್ನೇಹಿತ ಬಸವರಾಜ ಬಜಂತ್ರಿ ಎಂಬುವವರು ಇನ್ನಿತರ ಸ್ನೇಹಿತರಿಗೆ ಟ್ಯಾಗ್ ಮಾಡುವ ಮೂಲಕ ೇಸ್ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಠಾಣೆ ಎದುರು ಪೊಲೀಸ್ ಪೇದೆ ಶಿವನಗೌಡ ಬಿರಾದಾರಗೆ ಸನ್ಮಾನ ಮಾಡಿ ನಮ್ಮೂರಿನ ಹಿತೈಷಿ ಎಂದೂ ಬಸವರಾಜ ಬಜಂತ್ರಿ ಎಂಬುವವರು ತಮ್ಮ ಪೇಸ್ಪೇಜ್ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ತಪ್ಪಿನ ಅರಿವಾಗುತ್ತಿದ್ದಂತೆ ಬಸವರಾಜ ಬಜಂತ್ರಿ ತಮ್ಮ ೇಸ್ಬುಕ್ ಪೇಜ್ನಲ್ಲಿದ್ದ ಈ ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದಾರೆ. ಅಷ್ಟರಲ್ಲಿ ಫೆಸ್ಬುಕ್ ಪೋಸ್ಟ್ ಸ್ಕ್ರೀನ್ ಶಾಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದರೊಂದಿಗೆ ವೈರಲ್ ಆಗಿವೆ.
ಚುನಾವಣೆ ಸಮಯದಲ್ಲಿ ಪಿಎಸ್ಐ ಗಂಗುಬಾಯಿ ಬಿರಾದಾರ ಅವರು ನಿಜವಾಗಲೂ ಗೆಲುವಿಗೆ ಸಹಕಾರ ನೀಡಿದ್ದಾರೆಯೇ? ಅಥವಾ ಈ ರೀತಿ ಸೃಷ್ಟಿಸಿ ಅವರ ಮೇಲೆ ಆಪಾದನೆ ಬರುವಂತೆ ಚಾಣಾಕ್ಷ ಬುದ್ಧಿ ಉಪಯೋಗಿಸಿದ್ದಾರೆಯೇ? ಎಂಬುದು ಉನ್ನತ ಅಧಿಕಾರಿಗಳ ತನಿಖೆಯಿಂದ ಹೊರಬರಬೇಕಿದೆ.
ನಾನು ಠಾಣೆಯಲ್ಲಿದ್ದಾಗ ಸನ್ಮಾನ ಮಾಡಲು ಬಂದಿದ್ದೇವೆ ಮೇಡಂ ಎಂದು ಕೆಲವು ಜನ ಯುವಕರು ಬಂದರು. ಅವರ ಅಪೇಕ್ಷೆ ತಿರಸ್ಕರಿಸಬಾರದೆಂಬ ಕಾರಣದಿಂದ ಸನ್ಮಾನ ಮಾಡಿಸಿಕೊಂಡೆ. ಅದರ ಜತೆಗೆ ಸಿಹಿ ತಿನ್ನಿಸಿದರು. ಅವರಿಗೂ ಸಿಹಿ ತಿನ್ನಿಸಿ ಥ್ಯಾಂಕ್ಸ್ ಹೇಳಿ ಕಳುಹಿಸಿದೆ. ಅವರು ಗ್ರಾಪಂ ಸದಸ್ಯರೆಂಬುದೂ ನನಗೆ ಗೊತ್ತಿಲ್ಲ.ಪೊಲೀಸ್ ಇಲಾಖೆಗೆ ದ್ರೋಹ ಬಗೆಯುವಂತೆ ಕೆಲಸ ನಾನೆಂದೂ ಮಾಡಿಲ್ಲ. ನನ್ನನ್ನು ಬಲಿಪಶು ಮಾಡಲು ನಡೆಸಿರುವ ತಂತ್ರವಾಗಿದೆ.
ಗಂಗುಬಾಯಿ ಬಿರಾದಾರ, ಪಿಎಸ್ಐ ತಾಳಿಕೋಟೆ ಪೊಲೀಸ್ ಠಾಣೆ.
ಚುನಾವಣೆ ಸಂದರ್ಭದಲ್ಲಿ ಬಳವಾಟ ಗ್ರಾಮಕ್ಕೆ ಮುದ್ದೇಬಿಹಾಳ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತೋ ಅಥವಾ ತಾಳಿಕೋಟೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತೋ ಎಂಬುದನ್ನು ರಿಪೋರ್ಟ್ ನೋಡಿ ತಿಳಿದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಆನಂದ ವಾಘ್ಮೋಡೆ, ಸಿಪಿಐ ಮುದ್ದೇಬಿಹಾಳ