ಕಲಘಟಗಿ: ಗ್ರಾಮೀಣ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಈ ಅರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಹೇಳಿದರು.
ತಾಲೂಕಿನ ಬೇಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಘದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಲ್ಹಾದ ಜೋಶಿ ಅವರು ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಹೀಗಾಗಿ ಈ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದಾರೆ. ತಾಲೂಕು ಅಲ್ಲದೆ, ಇಡೀ ಜಿಲ್ಲೆಯಲ್ಲಿ ಈ ಸೇವೆ ಮಾಡುತ್ತಿರುವ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕ್ಷಮತಾ ಸೇವಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ ಮಾತನಾಡಿ, ಈಗಿನ ಯುಗದಲ್ಲಿ ಸಣ್ಣ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಬೇಕಾದರೆ ಹೆಚ್ಚೆಚ್ಚು ಹಣ ವಿನಿಯೋಗ ಮಾಡಬೇಕಾಗುತ್ತದೆ. ಆದ್ದರಿಂದ ಕೊಂಚಮಟ್ಟಿಗಾದರೂ ಗ್ರಾಮೀಣ ಭಾಗದ ಜನರ ಅರೋಗ್ಯಕ್ಕೆ ಅನುಕೂಲವಾಗಲಿ ಎಂಬ ಉದ್ದೇಶವನ್ನು ಈ ಕ್ಷಮತಾ ಸೇವಾ ಸಂಸ್ಥೆ ಹೊಂದಿದೆ ಎಂದು ಹೇಳಿದರು.
ಡಾ. ಶ್ರೀನಿವಾಸ ಜೋಶಿ ಮಾತನಾಡಿ, ಮುಂದಿನ ದಿನಮಾನಗಳಲ್ಲಿ ತಾಲೂಕಿನಾದ್ಯಂತ ಅನಗತ್ಯ ಅಂಧತ್ವ ಮುಕ್ತಿ ಮಾಡುವ ಕನಸನ್ನು ಕೇಂದ್ರ ಸಚಿವರು ಕಂಡಿದ್ದಾರೆ. ಆ ಉದ್ದೇಶದಿಂದ ಕಲಘಟಗಿಯಲ್ಲಿ 2 ವರ್ಷದ ಹಿಂದೆ ಜೋಶಿ ಕಣ್ಣಿನ ಆಸ್ಪತ್ರೆಯಲ್ಲಿ 1500ಕ್ಕೂ ಅಧಿಕ ಜನರ ಕಣ್ಣು ತಪಾಸಣೆ ಮಾಡಿ ಅಂಧತ್ವ ಹೋಗಲಾಡಿಸಲಾಗಿದೆ ಎಂದರು.
ಡಾ. ಜಿ.ಬಿ ಸತ್ತೂರ್, ಮುರಳೀಧರ ಮಳಗಿ, ಡಾ. ಮುಲ್ಕಿಪಾಟೀಲ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಐ.ಸಿ.ಗೋಕುಲ, ಶಿವಲಿಂಗಪ್ಪ ಯಲಿವಾಳ, ಸಿ.ಬಿ. ಹೊನ್ನಿಹಳ್ಳಿ, ಗ್ರಾ.ಪಂ. ಅಧ್ಯಕ್ಷೆ ನಾಗವ್ವ ಅಂಗಡಿ, ಶಂಕ್ರಪ್ಪ ಬೋಳಣ್ಣವರ, ವಿರೂಪಾಕ್ಷಪ್ಪ ಗಂಜಿಗಟ್ಟಿ, ವಿರೂಪಾಕ್ಷಪ್ಪ ಗೋಪಾಳಿ, ಹರೀಶ ಚಳ್ಳಮಟ್ಟಿ, ಡಾ. ಬಿ.ಎಂ. ಹಿರೇಮಠ, ಡಾ. ರವೀಂದ್ರ, ಡಾ. ಚಂದ್ರಶೇಖರ ಪಾಟೀಲ, ಡಾ. ಪ್ರಶಾಂತ, ಡಾ. ಪ್ರಭು ಬಿರಾದಾರ, ಕಿರಣಪಾಟೀಲ್ ಕುಲಕರ್ಣಿ, ಅರ್ಜುನ ಲಮಾಣಿ, ಅಣ್ಣಪ್ಪ ಓಲೇಕಾರ, ಗುರುನಾಥ ದಾನಾವೇನವರ, ದ್ರಾಕ್ಷಾಯಣಿ ಹಡಪದ, ಚನ್ನಬಸಪ್ಪ ಹುಲ್ಲಂಬಿ, ಮೌನೇಶ ಬಡಿಗೇರ ಇದ್ದರು.