ಮಳವಳ್ಳಿ: ವೃತ್ತಿ ಕೌಶಲಕ್ಕೆ ಅನುಗುಣವಾಗಿ ಸರ್ಕಾರ ಯಂತ್ರೋಪಕರಣಗಳ ನೆರವು ನೀಡುತ್ತಿದ್ದು, ಫಲಾನುಭವಿಗಳು ಇವುಗಳ ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ಬುಧವಾರ ಖಾದಿ ಗ್ರಾಮೋದ್ಯೋಗ ಮಂಡಳಿಯಿಂದ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಸೇರಿದಂತೆ ಇತರ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಸಮಾಜದಲ್ಲಿ ಕೆಳಸ್ಥರದ ಸಮುದಾಯಗಳ ಜೀವನ ಮಟ್ಟ ಸುಧಾರಣೆಗಾಗಿ ಸರ್ಕಾರ ಅನುದಾನವನ್ನು ಮೀಸಲಿರಿಸುತ್ತಿದೆ. ವೃತ್ತಿಗಳ ಆಧಾರದ ಮೇಲೆ ನೀಡಲಾಗುವ ಯಂತ್ರೋಪಕರಣಗಳಿಗೆ ತಾಲೂಕಿನಿಂದ ಸುಮಾರು ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಅನುದಾನದ ಹೊಂದಾಣಿಕೆಗೆ ಅನುಗುಣವಾಗಿ 88 ಹೊಲಿಗೆ ಯಂತ್ರ ಹಾಗೂ ಕ್ಷೌರಿಕ ಸಮಾಜದ 15 ಕಿಟ್ ಮತ್ತು ವಿಶ್ವಕರ್ಮ ಕುಶಲ ಕರ್ಮಿಗಳಿಗೆ ಯಂತ್ರೋಪಕರಣಗಳ ಕಿಟ್ಗಳನ್ನು ಫಲಾನುಭವಿಗಳು ಆಯ್ಕೆಯಾಗಿದ್ದು, ಇವುಗಳ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತೆ ಕರೆ ನಿಡಿದರು.
ಕೇಂದ್ರ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗುತ್ತದೆ ಎಂದು ಆರೋಪ ಮಾಡುತ್ತಿತ್ತು. ಆದರೆ ಪ್ರಸ್ತುತ ನಮ್ಮ ಯೋಜನೆಗಳನ್ನೇ ಕಾಪಿ ಮಾಡಿಕೊಂಡು ಚುನಾವಣಾ ಪ್ರಚಾರಕ್ಕೆ ಮುಂದಾಗಿವೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಸಾಹುಕಾರರ ಸಾಲ ತೀರಿಸುವಲ್ಲೇ ಇಷ್ಟು ದಿನ ನಿರತವಾಗಿತ್ತು. ಈಗ ಬಡ ಜನರಿಗೆ ಬದುಕು ಕಟ್ಟಿಕೊಡುತ್ತೇವೆಂದು ಸುಳ್ಳನ್ನು ಊದುತ್ತಿದ್ದಾರೆಂದು ಎಂದು ವ್ಯಂಗ್ಯವಾಡಿದರು. ತಹಸೀಲ್ದಾರ್ ಲೋಕೇಶ್, ತಾಪಂ ಇಒ ಮಮತಾ, ಡಿವೈಎಸ್ಪಿ ಕೃಷ್ಣಪ್ಪ, ಬಿಇಒ ಚಂದ್ರಪಾಟೀಲ ಸೇರಿದಂತೆ ಇತರರಿದ್ದರು.