ಕೊಟ್ಟಿಯಂ: ಕೇರಳವನ್ನೇ ಬೆಚ್ಚಿಬೀಳಿಸಿದ್ದ ಬ್ಯೂಟಿಷಿಯನ್ ಸುಚಿತ್ರಾ ಪಿಲ್ಲೈ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು ಬುಧವಾರ ಚಾರ್ಜ್ಶೀಟ್ ಸಲ್ಲಿಸಿದೆ.
ಸುಚಿತ್ರಾ (40) ಕೊಲ್ಲಂನ ಕೊಟ್ಟಿಯಂ ಬಳಿಯಿರುವ ಥ್ರಿಕ್ಕೊವಿಲ್ವಟ್ಟಂ ಪಟ್ಟಣದ ನಿವಾಸಿ. ವೃತ್ತಿಯಲ್ಲಿ ಬ್ಯೂಟಿಷಿಯನ್ ಆಗಿದ್ದ ಸುಚಿತ್ರಾ ಅವರ ಮೃತದೇಹ ಕಾಲುಗಳನ್ನು ಕತ್ತರಿಸಿ, ಅರ್ಧ ದೇಹ ಸುಟ್ಟು, ಹೂತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಕೊಲೆ ತಪ್ಪೊಪ್ಪಿಗೆ ಆಧಾರದ ಮೇಲೆ ಪಲಕ್ಕಾಡ್ ಜಿಲ್ಲೆಯ ಸಂಗೀತ ಶಿಕ್ಷಕನನ್ನು ವಶಕ್ಕೆ ಪಡೆಯಲಾಗಿತ್ತು.
ಇದನ್ನೂ ಓದಿ: ಕೇಂದ್ರ ಸರ್ಕಾರ ಅನ್ಲಾಕ್ ಮಾಡುತ್ತಿರುವ ಸಮಯದಲ್ಲೂ ಆಗಸ್ಟ್ 31ರವರೆಗೆ ಲಾಕ್ಡೌನ್ ವಿಸ್ತರಣೆ!
ಕೊಲ್ಲಂ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ (II)ಗೆ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಎಸಿಪಿ ಬಿ. ಗೋಪಕುಮಾರ್, ಸೈಬರ್ ಸೆಲ್ ಎಸ್ಐ ವಿ. ಅನಿಲ್ ಕುಮಾರ್ ಮತ್ತು ಅಪರಾಧ ವಿಭಾಗದ ಎಸ್ಐ ನಿಜಾಂ ಅವರು ನ್ಯಾಯಾಧೀಶರಾದ ಅರುಣ್ ಕುಮಾರ್ರಿಗೆ ಜಾರ್ಜ್ಶೀಟ್ ಹಸ್ತಾಂತರಿಸಿದ್ದಾರೆ.
ಸುಚಿತ್ರಾ ಅವರ ತಾಯಿ ವಿಜಯಲಕ್ಷ್ಮೀ ಅವರು ಕೊಟ್ಟಿಯಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ತನಿಖೆ ಆರಂಭಿಸಲಾಯಿತು. ಆದರೆ, ಪ್ರಕರಣದಲ್ಲಿ ಯಾವುದೇ ಬೆಳವಣಿಗೆ ಕಾಣದಿದ್ದಾಗ, ವಿಜಯಲಕ್ಷ್ಮೀ ಅವರು ಹೈಕೊರ್ಟ್ ಮೆಟ್ಟಿಲೇರಿದ್ದರು. ಬಳಿಕ ಪ್ರಕರಣ ಜಿಲ್ಲಾ ಅಪರಾಧ ವಿಭಾಗದ ತಂಡಕ್ಕೆ ಒಪ್ಪಿಸಲಾಗಿತ್ತು.
ತನ್ನ ಹೆಂಡತಿಗೆ ಫ್ಯಾಮಿಲಿ ಫ್ರೆಂಡ್ ಆಗಿದ್ದ ಸುಚಿತ್ರಾಳೊಂದಿಗೆ ಆರೋಪಿ ಪ್ರಶಾಂತ್ ಸ್ನೇಹ ಬೆಳೆಸಿದ್ದ. ನಂತರ ದಿನಗಳಲ್ಲಿ ಇಬ್ಬರು ಸಾಮಾಜಿಕ ಜಾಲತಾಣ ಮೂಲಕ ತುಂಬಾ ಪರಿಚಿತರಾದರು. ಅಲ್ಲದೆ, ಸುಚಿತ್ರಾಳಿಂದ ಪ್ರಶಾಂತ್ 2.75 ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದ. ಹಣ ವಾಪಸ್ ನೀಡುವಂತೆ ಇಬ್ಬರ ನಡುವೆ ಉಂಟಾದ ವಾಗ್ವಾದವೇ ಕೊಲೆಗೆ ಕಾರಣವಾಗಿದೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿನಿಯರ ಅಶ್ಲೀಲ ಫೋಟೋಗಳನ್ನು ಅಪ್ಲೋಡ್ ಮಾಡ್ತಿದ್ದ ಟೆಕ್ಕಿಗಳಿಬ್ಬರ ಬಂಧನ
ಇದೀಗ ಪ್ರಶಾಂತ್ ವಿರುದ್ಧ ಅಪಹರಣ, ಆಭರಣಗಳ ಕಳ್ಳತನ, ಮೃತದೇಹಕ್ಕೆ ಅಗೌರವ ತೋರಿಸಿದ್ದು ಮತ್ತು ಸಾಕ್ಷ್ಯಾನಾಶ ಪ್ರಕರಣಗಳನ್ನು ದಾಖಲಾಗಿದೆ.
ಘಟನೆ ಹಿನ್ನೆಲೆ
ಕೊಚ್ಚಿಯಲ್ಲಿ ತರಬೇತಿ ಇದೆ ಎಂದು ಹೇಳಿ ಸುಚಿತ್ರಾ ಮಾರ್ಚ್ 18ರಂದು ಮನೆಯಿಂದ ಹೊರಹೋದರು. ಅದಾದ ಎರಡು ದಿನಗಳಲ್ಲೇ (ಮಾರ್ಚ್ 20) ಮೊಬೈಲ್ ಫೋನ್ ನಾಟ್ ರೀಚಬಲ್ ಆಗಿತ್ತು. ಗಾಬರಿಗೊಂಡ ಕುಟುಂಬ ಮಾರ್ಚ್ 22ರಂದು ಕೊಟ್ಟಿಯಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ, ತಾಯಿಗೆ ಹುಷಾರಿಲ್ಲ 5 ದಿನ ರಜೆ ಬೇಕೆಂದು ಉದ್ಯೋಗದಾತರ ಬಳಿ ಸುಚಿತ್ರಾ ರಜೆ ಕೇಳಿ, ಮನೆಯಲ್ಲಿ ತರಬೇತಿ ಇದೆ ಎಂದು ಹೇಳಿದ್ದು ಗೊತ್ತಾಯಿತು. ಅನುಮಾನಗೊಂಡ ಪೊಲೀಸರು ಸುಚಿತ್ರಾ ಕಾಲ್ ಡೀಟೇಲ್ಸ್ ತೆಗೆದು ನೋಡಿದಾಗ ಪಲಕ್ಕಾಡ್ ಸಂಗೀತ ಶಿಕ್ಷಕ ಪ್ರಶಾಂತ್ರೊಂದಿಗೆ ಸಂಪರ್ಕವಿದ್ದಿದ್ದು ತಿಳಿದುಬಂತು. ತನಿಖೆಗಾಗಿ ಕೊಲ್ಲಂ ಪೊಲೀಸ್ ತಂಡ ಪಲಕ್ಕಾಡ್ಗೆ ತೆರಳಿತು. ಈ ವೇಳೆ ತಾನೇ ಕೊಲೆ ಮಾಡಿದ್ದಾಗಿ ಪ್ರಶಾಂತ್ ತಪ್ಪೊಪ್ಪಿಕೊಂಡಿದ್ದ.
ಸುಚಿತ್ರಾಳನ್ನು ತನ್ನ ಮನೆಗೆ ಕರೆತರಲು ತನ್ನ ಕುಟುಂಬವನ್ನು ಮಾರ್ಚ್ 18ರಂದು ಪ್ರಶಾಂತ್ ಹೊರಗೆ ಕಳುಹಿಸಿದ್ದ. ಮನೆಗೆ ಬಂದ ಸುಚಿತ್ರಾ ಮತ್ತು ಪ್ರಶಾಂತ್ ನಡುವೆ ಗಲಾಟೆ ನಡೆದು, ಕೊಲೆಯಲ್ಲಿ ಅಂತ್ಯವಾಗಿದೆ. ಟೇಬಲ್ ಲ್ಯಾಂಪ್ನ ಕೇಬಲ್ ಸಹಾಯದಿಂದ ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ. ಬಳಿಕ ಆಕೆಯ ಮೃತದೇಹದ ಎರಡು ಕಾಲುಗಳನ್ನು ಚಾಕುವಿನಿಂದ ಕೊಯ್ದು, ಸುಡಲು ಯತ್ನಿಸಿ ಕೊನೆಗೆ ಹಾಗೇ ಹೂತಿದ್ದಾನೆ. ಮತ್ತಷ್ಟು ವಿಚಾರಣೆ ನಡೆಸಿದಾಗ ಆರೋಪಿ ಪ್ರಶಾಂತ್ ಹೇಳಿದಂತೆ ಪಲಕ್ಕಾಡ್ನ ರಾಮನಾಥಪುರಂ ಬಳಿಯಿರುವ ಆತನ ಬಾಡಿಗೆ ಮನೆಯ ಆವರಣವನ್ನು ಹುಡುಕಾಡಿದಾಗ ಪೊಲೀಸರಿಗೆ ಸುಚಿತ್ರಾ ಮೃತದೇಹ ಪತ್ತೆಯಾಗಿತ್ತು. (ಏಜೆನ್ಸೀಸ್)
ಇದನ್ನೂ ಓದಿ: ಒಂಬತ್ತನೇ ಗಂಡನಿಂದ ಕೊಲೆಯಾದ ಮಹಿಳೆಯ ಹಿನ್ನೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರೆಂಟಿ!
ಸುಳ್ಳು ಹೇಳಿ ಬಾಯ್ಫ್ರೆಂಡ್ ನೋಡಲು ಹೋದ ಕೇರಳ ಬ್ಯೂಟಿಷಿಯನ್ ದುರಂತ ಅಂತ್ಯವಾಗಿದ್ದು ಹೇಗೆ?