ಬೆಂಗಳೂರು: ಬಿಟ್ ಕಾಯಿನ್ ಹಗರಣದ ಆರೋಪಿ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ಭದ್ರತೆ ಒದಗಿಸುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.
ಬಿಟ್ ಕಾಯಿನ್ ಪ್ರಕರಣದಲ್ಲಿ ರಾಜಕಾರಣಿಗಳ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿ ಶ್ರೀಕಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದವು. ಅಲ್ಲದೆ, ಗುಪ್ತಚರ ಇಲಾಖೆಯಿಂದ ಶ್ರೀಕಿ ಪ್ರಾಣಕ್ಕೆ ಅಪಾಯ ಇರುವುದಾಗಿಯೂ ವರದಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಶ್ರೀಕಿಗೆ ಗನ್ಮ್ಯಾನ್ ಮತ್ತು ಜಯನಗರದಲ್ಲಿ ಇರುವ ಆತನ ಮನೆಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಪಾಳಿಯ ಮೇರೆಗೆ ದಿನದ 24 ತಾಸು ಶ್ರೀಕಿಗೆ ಇಬ್ಬರು ಪೊಲೀಸರು ಭದ್ರತೆಯಲ್ಲಿರುತ್ತಾರೆ. ಆದರೆ ಶ್ರೀಕಿಯನ್ನು ಕಾಯೋದೆ ಅವರಿಗೆ ತಲೆನೋವಾಗಿದೆ ಎನ್ನಲಾಗಿದೆ. ಮನೆಯಿಂದ ಹೊರಗೆ ಹೋದರೇ ಶ್ರೀಕಿಯನ್ನು ಗನ್ಮ್ಯಾನ್ ಹಿಂಬಾಲಿಸಬೇಕಿದೆ. ಆದರೆ ಕೆಲವು ಬಾರಿ ಗನ್ಮ್ಯಾನ್ಗಳ ದಿಕ್ಕು ತಪ್ಪಿಸಿ ಶ್ರೀಕಿ ಓಡಾಡುತ್ತಾನೆ. ಸುರಕ್ಷತೆ ಬಗ್ಗೆ ಆತನಿಗೆ ಹೇಳಿದರು ಸಹ ಕೇಳುವುದಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.
ಈಗಾಗಲೇ ವಿಶೇಷ ತನಿಖಾ ದಳ (ಎಸ್ಐಟಿ) ಬಿಟ್ ಕಾಯಿನ್ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿವೆ. ವಿದೇಶಿ ಸಂಸ್ಥೆಗಳ ಸಹಾಯದಿಂದ ಸಾಕ್ಷಾೃಧಾರಗಳನ್ನು ಹುಡುಕಾಟ ನಡೆಸುತ್ತಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ತಿರುವು ಪಡೆಯಬಹುದು. ಆದರಿಂದ ಪ್ರಮುಖ ಆರೋಪಿ ಶ್ರೀಕಿಗೆ ಭದ್ರತೆ ನೀಡಲಾಗಿದೆ ಎನ್ನಲಾಗಿದೆ.