ಕೊಕಟನೂರ: ಶರಣರ ಬದುಕು ಸಮಾಜ ಹಾಗೂ ಭಕ್ತರ ಅಭಿವೃದ್ಧಿಗೆ ಮೀಸಲಾಗಿರುತ್ತದೆ ಹೊರತು ವೈಯಕ್ತಿಕ ಸುಖಕ್ಕಾಗಿ ಅಲ್ಲ ಎಂದು ಅಥಣಿ ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಹೇಳಿದ್ದಾರೆ.
ಅಥಣಿ ತಾಲೂಕಿನ ನದಿ ಇಂಗಳಗಾವ ಗ್ರಾಮದಲ್ಲಿ 60ನೇ ಮಹಾಶಿವರಾತ್ರಿಯ ಶರಣ ಸಂಸ್ಕೃತಿ ಉತ್ಸವ ಹಾಗೂ ಮುರಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಷಟ್ಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಗುರು ಇತರರಿಗೆ ಮರುಗುವುದನ್ನು ಕಲಿಸುತ್ತಾನೆ. ಮಣಿಯುವುದನ್ನು ಹೇಳಿಕೊಡುತ್ತಾನೆ, ಪರರ ನೋವಿನಲ್ಲಿ ಭಾಗಿಯಾಗುವವನೇ ಮನುಷ್ಯನಾಗಿದ್ದಾನೆ.
ಬೀಗುವುದನ್ನು ಬಿಟ್ಟು ಭಾಗುವುದನ್ನು ಹೇಳಿಕೊಡುವ ಗುರು ತಪ್ಪುಗಳನ್ನು ಮನ್ನಿಸಿ ಸರಳತೆಯನ್ನು ಕಲಿಸಿಕೊಡುತ್ತಾನೆ ಎಂದರು. ನದಿ ಇಂಗಳಗಾವ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಲೋಕದಲ್ಲಿ ಎಲ್ಲವೂ ಕ್ಷಣಿಕವಾಗಿದೆ. ಮುಪ್ಪಾಯಿತೆಂದು ಮರುಗಬಾರದು, ಸುಖ ಸಿಕ್ಕಿತು ಎಂದು ಹಿಗ್ಗಬಾರದು. ಎಲ್ಲರಿಗೂ ಒಳಿತು ಬಯಸುತ್ತ ಉತ್ತಮ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಅಡಹಳ್ಳಟ್ಟಿಯ ಪಂಚಾಕ್ಷರಿ ಸ್ವಾಮೀಜಿ, ಹೊಸೂರಿನ ಸಂಗಮೇಶ್ವರ ಸ್ವಾಮೀಜಿ, ಐ.ಆರ್.ಮಠಪತಿ, ಗ್ರಾಪಂ ಅಧ್ಯಕ್ಷ ಶಂಕರ ಠಕ್ಕಣ್ಣವರ, ಬಸಗೌಡ ಚನಗೌಡರ, ಗುರುಬಸು ತೇವಮಣಿ, ಚನ್ನಗೌಡ ರಾಚಗೌಡರ, ಮಹಾಂತೇಶ ಗೂಳಪ್ಪನವರ, ಹನುಮಂತ ಸತಿಗೌಡರ, ಕುಮಾರ ಮಠಪತಿ, ಶ್ರೀಶೈಲ ಹಲ್ಯಾಳ, ಅಪ್ಪಾಸಾಬ ಚನ್ನಗೌಡರ, ಮುರಗೇಶ ಮಾಳಿ ಇತರರಿದ್ದರು.