ನವದೆಹಲಿ: ಭಾರತೀಯ ಕ್ರಿಕೆಟ್ ವಲಯದಲ್ಲಿ ‘ಮಿಸ್ಟರ್ ಐಪಿಎಲ್’ ಎಂದು ಕರೆಸಿಕೊಂಡಿರುವ ಸುರೇಶ್ ರೈನಾ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ವಾಪಸಾಗುತ್ತಿದ್ದಾರೆ. ಬರೋಬ್ಬರಿ 20 ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2020-21ನೇ ಸಾಲಿನ ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಟೂರ್ನಿಯಲ್ಲಿ ಉತ್ತರ ಪ್ರದೇಶ ಪ್ರತಿನಿಧಿಸಲು ರೈನಾ ಸಜ್ಜಾಗಿದ್ದಾರೆ. ಈ ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಇನ್ನಷ್ಟೇ ಪ್ರಕಟಿಸಬೇಕಿದೆ. 2019ರ ಐಪಿಎಲ್ ಫೈನಲ್ ಪಂದ್ಯವೇ ರೈನಾ ಆಡಿದ ಕಡೇ ಸ್ಪರ್ಧಾತ್ಮಕ ಪಂದ್ಯವಾಗಿದೆ.
13ನೇ ಐಪಿಎಲ್ನಲ್ಲಿ ಆಡಲು ಯುಎಇಗೆ ತೆರಳಿದ ರೈನಾ ವೈಯಕ್ತಿಕ ಕಾರಣ ಕೊಟ್ಟು ತವರಿಗೆ ವಾಪಸಾಗಿದ್ದರು. ಇದಕ್ಕೂ ಮೊದಲು ಚೆನ್ನೈನಲ್ಲಿ ಐಪಿಎಲ್ಗೆ ಸಿದ್ಧತೆ ಕೈಗೊಳ್ಳುವಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು. ಎಂಎಸ್ ಧೋನಿ ವಿದಾಯ ಹೇಳಿದ ಬೆನ್ನಲ್ಲೇ ರೈನಾ ಕೂಡ ನಿವೃತ್ತಿ ಹೇಳಿದ್ದರು. ಇದೀಗ ಮುಂದಿನ ಐಪಿಎಲ್ ಮೇಲೆ ಕಣ್ಣಿಟ್ಟಿರುವ ಸುರೇಶ್ ರೈನಾ, 14ನೇ ಆವೃತ್ತಿಗೆ ಸಜ್ಜಾಗುತ್ತಿರುವುದಾಗಿ ಘೋಷಿಸಿದ್ದಾರೆ. ಇದಕ್ಕಾಗಿ ಮುಂಬರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ತವರು ರಾಜ್ಯ ಉತ್ತರ ಪ್ರದೇಶ ತಂಡದ ಪರ ಕಣಕ್ಕಿಳಿಯಲಿದ್ದಾರೆ. ರೈನಾ ಸಾರಥ್ಯದ ಉತ್ತರ ಪ್ರದೇಶ ತಂಡ 2015-16ರಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಜಯಿಸಿತ್ತು.
ಡಿಸೆಂಬರ್ 24 ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ದೇಶೀಯ ಕ್ರಿಕೆಟ್ ವೇಳಾಪಟ್ಟಿ ಅಂತಿಮಗೊಳ್ಳುವ ಸಾಧ್ಯತೆಗಳಿವೆ. ಪ್ರಸಕ್ತ ವರ್ಷ ರಣಜಿ ಟ್ರೋಫಿ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗಳನ್ನು ಮಾತ್ರ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ ಎನ್ನಲಾಗಿದೆ. 2021ರ ಏಪ್ರಿಲ್-ಮೇ ತಿಂಗಳಲ್ಲಿ 14ನೇ ಐಪಿಎಲ್ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ.
ಐಸಿಸಿ ಟಿ20 ರ್ಯಾಂಕಿಂಗ್ನಲ್ಲಿ ಏರಿಕೆ ಕಂಡ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್