More

    ವೆಂಕಟ್ ಜತೆಗೆ ಸುದೀಪ್ ಚಿತ್ರ: ಸೆ. 2ರ ಕಿಚ್ಚನ ಹುಟ್ಟುಹಬ್ಬಕ್ಕೆ ಘೋಷಣೆ

    ಬೆಂಗಳೂರು: ‘ಲುಕ್ಕಿಂಗ್ ಫಾರ್ವರ್ಡ್ ಟು ಅವರ್ ನೆಕ್ಸ್ಟ್ …’ ಹೀಗೆ ಹೇಳುವ ಮೂಲಕ ಎಲ್ಲ ಪ್ರಶ್ನೆಗಳಿಗೂ ತೆರೆ ಎಳೆದಿದ್ದಾರೆ ತಮಿಳು ನಿರ್ದೇಶಕ ವೆಂಕಟ್ ಪ್ರಭು. ಇಳಯರಾಜ ಅವರ ಸಹೋದರ ಗಂಗೈ ಅಮರನ್ ಅವರ ಮಗ ವೆಂಕಟ್ ಪ್ರಭು, ತಮಿಳಿನಲ್ಲಿ ಜನಪ್ರಿಯ ನಿರ್ದೇಶಕರಾಗಿ ಗುರುತಿಸಿಕೊಂಡವರು. ‘ಚೆನ್ನೈ 6000028’, ‘ಗೋವಾ’, ‘ಸರೋಜಾ’, ‘ಬಿರಿಯಾನಿ’, ‘ಮಂಕಾಥಾ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದವರು. ಈ ಪೈಕಿ, ಎರಡು ಚಿತ್ರಗಳು ಕನ್ನಡಕ್ಕೆ ರಿಮೇಕ್ ಆಗಿವೆ. ಈಗ ಅವರು ಸುದೀಪ್ ಅಭಿನಯದಲ್ಲಿ ಚಿತ್ರ ನಿರ್ದೇಶಿಸುವುದಕ್ಕೆ ಮುಂದಾಗಿದ್ದಾರೆ.

    ‘ವಿಕ್ರಾಂತ್ ರೋಣ’ ಮುಗಿಯುವ ಹಂತಕ್ಕೆ ಬರುತ್ತಿದ್ದಂತೆಯೇ, ಸುದೀಪ್ ಅಭಿನಯದ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆ ಕೇಳಿಬಂದಿತ್ತು. ‘ವಿಕ್ರಾಂತ್ ರೋಣ’ ತರಹವೇ ಇನ್ನೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ ಸುದೀಪ್ ನಟಿಸುತ್ತಾರೆ ಎಂಬ ಸುದ್ದಿ ಇತ್ತು. ತೀರಾ ಇತ್ತೀಚೆಗೆ ವೆಂಕಟ್ ಪ್ರಭು ನಿರ್ದೇಶನದಲ್ಲಿ ಸುದೀಪ್ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತಾದರೂ, ಆ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಅದೀಗ ಆ ಸುದ್ದಿ ಖಾತ್ರಿಯಾಗಿದೆ. ಸ್ವತಃ ವೆಂಕಟ್, ಸುದೀಪ್ ಜತೆಗೆ ಚಿತ್ರ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

    ಇತ್ತೀಚೆಗೆ, ಸುದೀಪ್ ಮತ್ತು ವೆಂಕಟ್ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸುದೀಪ್, ವೆಂಕಟ್​ಗೆ ಆಮ್ಲೆಟ್ ಮಾಡಿಕೊಟ್ಟಿದ್ದಾರೆ. ಸುದೀಪ್ ಜತೆಗಿರುವ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವೆಂಕಟ್, ‘ಎಂಥಾ ಆತಿಥ್ಯ. ನೀವೊಬ್ಬ ಅದ್ಭುತವಾದ ಕುಕ್. ನಮ್ಮ ಹೊಸ ಚಿತ್ರಕ್ಕೆ ಎದುರು ನೋಡುತ್ತಿದ್ದೇನೆ. ಹುಟ್ಟುಹಬ್ಬದ ಮುಂಗಡ ಶುಭಾಶಯಗಳು’ ಎಂದು ಹಾರೈಸಿದ್ದಾರೆ.

    ಅಲ್ಲಿಗೆ, ಸುದೀಪ್ ಮತ್ತು ವೆಂಕಟ್ ಒಟ್ಟಿಗೆ ಚಿತ್ರ ಮಾಡುವುದು ಖಾತ್ರಿಯಾಗಿದೆ. ಯಾವಾಗ? ಎಲ್ಲಿ? ಏನು ಎಂಬ ಪ್ರಶ್ನೆಗಳಿಗೆಲ್ಲ ಸುದೀಪ್ ಹುಟ್ಟುಹಬ್ಬದಂದು (ಸೆಪ್ಟೆಂಬರ್ 2) ಉತ್ತರ ಸಿಗುವ ನಿರೀಕ್ಷೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts