ಬಾಳೆಹೊನ್ನೂರು: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರಿ ಇಟ್ಟುಕೊಂಡು ಮುಂದುವರಿಯ ಬೇಕು ಎಂದು ಎಸ್ಜೆಆರ್ ಕಾಲೇಜು ಪ್ರಾಚಾರ್ಯ ಕೆ.ಆರ್.ಭೂದೇಶ್ ಹೇಳಿದರು.
ಪಟ್ಟಣದ ಎಸ್ಜೆಆರ್ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಶಾರದಾ ಪೂಜೆ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಗುರಿಯೊಂದಿಗೆ ಮುಂದುವರಿದರೆ ಅವರ ಹಿಂದೆ ಗುರುಗಳು ಇರಲಿದ್ದಾರೆ. ಆಗ ಮಾತ್ರ ಸಾಧನೆ ಮಾಡಲು ಸಾಧ್ಯವಿದೆ. ಛಲ ಬಿಡದೆ ಶ್ರಮ ಪಟ್ಟವರಿಗೆ ಸಾಧನೆ ಎನ್ನುವುದು ವರವಾಗಿ ಲಭಿಸಲಿದೆ. ಎಸ್ಸೆಸ್ಸೆಲ್ಸಿ ಎಂಬುದು ವಿದ್ಯಾರ್ಥಿ ಜೀವನದ ಉತ್ತಮ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಉದಾಸೀನ ಮಾಡದೇ ಅಭ್ಯಾಸದಲ್ಲಿ ತೊಡಗಬೇಕು ಎಂದರು.
ಉದಾಸೀನ ಎಂಬುದು ವಿದ್ಯಾರ್ಥಿಗಳ ಜೀವನವನ್ನೇ ಹಾಳು ಮಾಡಲಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ಅಗತ್ಯ. ಪರೀಕ್ಷೆಯಲ್ಲಿ ಆತಂಕ ಪಡದೆ ಧೈರ್ಯದಿಂದ ಪರೀಕ್ಷೆ ಎದುರಿಸಿ ತಮಗೆ ಗೊತ್ತಿರುವ ಚಾರಗಳನ್ನು ಉತ್ತರ ಪತ್ರಿಕೆಯಲ್ಲಿ ಬರೆಯಬೇಕು ಎಂದರು.
ಉಪನ್ಯಾಸಕಿ ಭಾರತಿ ಮಾತನಾಡಿ, ಬಾಳೆಹೊನ್ನೂರು ವಿದ್ಯಾಸಂಸ್ಥೆಯಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿದ್ದು ಸಂತಸ ತಂದಿದೆ. ವಿದ್ಯಾ ಸಂಸ್ಥೆಯಲ್ಲಿ ಉತ್ತಮ ವಾತಾವರಣವಿದೆ. ವಿದ್ಯಾರ್ಥಿಗಳು ಸಹ ಉತ್ತಮ ರೀತಿಯಲ್ಲಿ ವ್ಯಾಸಂಗದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು. ಶಿಕ್ಷಕರಾದ ಬಿ.ಎಸ್.ಕುಮಾರಚಂದ್ರ ನಾಯಕ್, ಬಿ.ಎಸ್.ಲತಾ, ನಟರಾಜ್ ನಾಯಕ್, ಉಮಾಶಂಕರ್ ಮತ್ತಿತರರು ಹಾಜರಿದ್ದರು.