ವಿಜಯಪುರ: ಎಜುಕೇಷನ್ ಎಕ್ಸಪೋ ಚಿತ್ರಕಲೆ ಸ್ಪರ್ಧೆಯಲ್ಲಿ ಒಟ್ಟು 43 ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ನಿಸರ್ಗ ಚಿತ್ರಣ ರಚನೆ ವಿಷಯದಲ್ಲಿ ವಿಜಯಪುರದ ಚೇತನಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಅನನ್ಯ ಗೌರಿಮಠ ಪ್ರಥಮ, ಟಕ್ಕಳಕಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಕರಣ ರಾಠೋಡ ದ್ವಿತೀಯ, ಟಕ್ಕಳಕಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ವಿಶಾಲ ಅಶೋಕ ಪವಾರ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ನೆನಪಿನ ಕಾಣಿಕೆಯಾಗಿ ಮೆಡಲ್ ಹಾಗೂ ಸಸಿ ವಿತರಿಸಿ ಶುಭ ಹಾರೈಸಲಾಯಿತು.
ವಿಜಯಪುರ ಸರ್ಕಾರಿ ಡಯಟ್ ಕಾಲೇಜು ಚಿತ್ರಕಲಾ ಉಪನ್ಯಾಸಕ ಮಂಜುನಾಥ ಮಾನೆ ನೇತೃತ್ವದಲ್ಲಿ ನಿರ್ಣಾಯಕರಾಗಿ ಸಿಕ್ಯಾಬ್ ಕಾಲೇಜು ಚಿತ್ರಕಲಾ ಶಿಕ್ಷಕ ಕಮಲೇಶ ಭಜಂತ್ರಿ, ಟಕ್ಕೆಯ ಪ್ರಿಯದರ್ಶಿನಿ ಸ್ಕೂಲ್ ಚಿತ್ರಕಲಾ ಶಿಕ್ಷಕ ಶಿವಾನಂದ ಅಥಣಿ, ಟಕ್ಕಳಕಿ ಸರ್ಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ಆನಂದ ಝಂಡೆ ಕಾರ್ಯ ನಿರ್ವಹಿಸಿದರು. ಚಿತ್ರಕಲಾ ಸ್ಪರ್ಧೆಯ ನಿರ್ಣಾಯಕರನ್ನು ವಿಜಯವಾಣಿ ಬಳಗದಿಂದ ಸನ್ಮಾನಿಸಲಾಯಿತು.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅನನ್ಯ ಗೌರಿಮಠ ಮಾತನಾಡಿ, ಕರೊನಾ ಸಮಯದಲ್ಲಿ ಸಮಯ ಸದ್ಬಳಕೆ ಮಾಡಿಕೊಂಡು ಚಿತ್ರ ಬಿಡಿಸುವುದನ್ನು ಕಲಿಯಲು ತೊಡಗಿದ್ದೆ. ಚಿತ್ರಕಲೆ ಬಿಡಿಸುತ್ತಾ ಹೋದಂತೆ ಆಸಕ್ತಿ ಹೆಚ್ಚಿತು. ಆಸಕ್ತಿ ಹವ್ಯಾಸವಾಗಿ ಬೆಳೆಯಿತು. ಓದಿನ ಜತೆಗೆ ಚಿತ್ರಕಲೆಯೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಒಂದು ಚಿತ್ರ ಅನೇಕ ಸಾಮಾಜಿಕ ಸಂದೇಶಗಳನ್ನು ಸಾರುವುದನ್ನು ಅರಿತುಕೊಂಡು ಅದರಲ್ಲಿ ಮುಂದುವರಿಸಿದ್ದೇನೆ. ವಿಜಯವಾಣಿ ಬಳಗದವರು ಆಯೋಜಿಸಿರುವ ಬೃಹತ್ ಎಕ್ಸಪೋದಲ್ಲಿ ಭಾಗವಹಿಸಿದ್ದು ಸಂತಸ ತಂದಿತ್ತು. ಜತೆಗೆ ಪ್ರಥಮ ಬಹುಮಾನ ಬಂದಿದ್ದುಎ, ಮತ್ತಷ್ಟು ಖುಷಿ ಇಮ್ಮಡಿಗೊಳಿಸಿದೆ.