ಬೆಳಗಾವಿ: ಕೆಎಸ್ಆರ್ಪಿ ಉತ್ಸವ ಹಾಗೂ ಕರೊನಾ ನಿಯಂತ್ರಣ ಜಾಗೃತಿ ಮೂಡಿಸಲು ಕೆಎಸ್ಆರ್ಪಿ ಎಡಿಜಿಪಿ ಅಲೋಕಕುಮಾರ್ ಅವರು ಸುವರ್ಣ ವಿಧಾನಸೌಧ ಮುಂಭಾಗದಿಂದ ಬುಧವಾರ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು.
ಸೈಕಲ್ ಜಾಥಾವು ಎನ್ಎಚ್-4 ಮಾರ್ಗವಾಗಿ, ಅಶೋಕ ವೃತ್ತ, ಆರ್ಟಿಒ ವೃತ್ತ ಮೂಲಕ ರಾಣಿ ಚನ್ನಮ್ಮ ವೃತ್ತ ತಲುಪಿತು. ಎಡಿಜಿಪಿ ಅಲೋಕಕುಮಾರ್ ಅವರು ರಾಣಿ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು. ಬಳಿಕ ಚನ್ನಮ್ಮ ವೃತ್ತದಿಂದ ಕಾಲೇಜ್ ರಸ್ತೆ, ಕಾಂಗ್ರೆಸ್ ರಸ್ತೆ, ಉದ್ಯಮಬಾಗ್ ರಸ್ತೆ ಹಾಗೂ ಪೀರನವಾಡಿ ಮಾರ್ಗವಾಗಿ ಕೆಎಸ್ಆರ್ಪಿ 2ನೇ ಪಡೆ ಆವರಣಕ್ಕೆ ಸೈಕಲ್ ಜಾಥಾ ಆಗಮಿಸಿತು.
ಈ ವೇಳೆ ಮಾತನಾಡಿದ ಅಲೋಕಕುಮಾರ್, ಒತ್ತಡದ ಜೀವನದಿಂದಾಗಿ ನಾಗರಿಕರಿಗೆ ನೆಮ್ಮದಿಯೇ ಸಿಗುತ್ತಿಲ್ಲ. ಇದರಿಂದಾಗಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಸದೃಢ ಆರೋಗ್ಯ ಬೆಳೆಸಿಕೊಳ್ಳಲು ದಿನಕ್ಕೆ 4-5 ಕಿ.ಮೀ. ಸೈಕಲ್ ಸವಾರಿ ಮಾಡಬೇಕು.
ಸೈಕಲ್ ಬಳಕೆಯಿಂದ ಪರಿಸರ ಮಾಲಿನ್ಯವನ್ನೂ ತಡೆಗಟ್ಟಿದಂತಾಗುತ್ತದೆ ಎಂದರು. ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್, ಕೆಎಸ್ಆರ್ಪಿ 2ನೇ ಪಡೆ ಕಮಾಂಡೆಂಟ್ ಹಂಜಾ ಹುಸೇನ್, ಕೆಎಸ್ಆರ್ಪಿ ತರಬೇತಿ ಶಾಲೆ ಪ್ರಾಚಾರ್ಯ ರಮೇಶ ಬೋರಗಾವೆ, ಕೆಎಸ್ಆರ್ಪಿ 2ನೇ ಪಡೆಯ ಅಧಿಕಾರಿ ಸಿಬ್ಬಂದಿ, ಬೆಳಗಾವಿ ಜಿಲ್ಲೆ ಸೈಕ್ಲಿಂಗ್ ಕ್ಲಬ್, ಬೆಳಗಾವಿಯ ಎನ್ಸಿಸಿ ವಿಭಾಗ, ಕೆಎಸ್ಐಎಸ್ಎಫ್, ಅಗ್ನಿಶಾಮಕ ಇಲಾಖೆ, ಅರಣ್ಯ ಇಲಾಖೆ, ಸಿಆರ್ಪಿಎಫ್ ಕೋಬ್ರಾ ಕ್ಯಾಂಪ್, ಐಟಿಬಿಪಿ ತರಬೇತಿ ಶಾಲೆ, ಮ್ಯಾರಥಾನ್ ಬಾಯ್, ಬೆಳಗಾವಿ ಪೆಡ್ಲರ್ ಕ್ಲಬ್, ಡಿವೈನ್ ಮರ್ಸಿ ಶಾಲೆ, ಸಿಎಂವಿ- ಐಎಎಸ್ ತರಬೇತಿ ಅಕಾಡೆಮಿ, ವೇಣುಗ್ರಾಮ ಸೈಕಲ್ ಕ್ಲಬ್ ಹಾಗೂ ನಗರದ ಸಾರ್ವಜನಿಕರು ಪಾಲ್ಗೊಂಡಿದ್ದರು.