ಗುರುಗುಂಟಾ: ಉತ್ತಮ ಆರೋಗ್ಯ ಹೊಂದಿದ್ದರೆ ಸದೃಢ ದೇಶ ನಿರ್ಮಾಣ ಸಾಧ್ಯ ಎಂದು ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ ರಾಠೋಡ್ ಹೇಳಿದರು.
ಗೌಡೂರಿನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರದ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು. ಒತ್ತಡ ಮತ್ತು ಆಡಂಬರದ ಜೀವನದಿಂದಾಗಿ ಬಹುತೇಕರು ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ. ಮನೆಯ ಊಟ ಬದಲಿಗೆ ಹೊರಗಿನ ಪದಾರ್ಥಗಳ ಸೇವನೆ ಮಾಡಿ, ಇಲ್ಲದ ವಿಚಾರಗಳ ಬಗ್ಗೆ ಚಿಂತಿಸಿ ರಕ್ತದೊತ್ತಡ, ಸಕ್ಕರೆ, ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿದ್ದೇವೆ ಎಂದರು.
ದೈಹಿಕ, ಮಾನಸಿಕ, ಸಾಮಾಜಿಕವಾಗಿ ಸುಸ್ಥಿತಿಯಲ್ಲಿರದೆ ಅನಾರೋಗ್ಯಕ್ಕೊಳಗಾಗುತ್ತಿದ್ದೇವೆ. ಜನರ ಅನಾರೋಗ್ಯಕ್ಕೆ ಅನುಗುಣವಾಗಿ ಆಸ್ಪತ್ರೆಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ. ಸಕಾಲಕ್ಕೆ ನಿದ್ರೆ, ವ್ಯಾಯಾಮ, ಪೌಷ್ಟಿಕ ಆಹಾರ ಸೇವನೆ ಮೂಲಕ ಆರೋಗ್ಯ ರಕ್ಷಿಸಿಕೊಳ್ಳಬೇಕಾಗಿದೆ ಎಂದು ವೆಂಕಟೇಶ ರಾಠೋಡ್ ತಿಳಿಸಿದರು.
ವೈದ್ಯರಾದ ಹನುಮಾನ್, ರಾಜೇಂದ್ರ, ಸಂಘದ ದೇವದುರ್ಗ ತಾಲೂಕು ಅಧ್ಯಕ್ಷ ಸಚಿನ್ ಪವಾರ್, ಗೌಡೂರು ಘಟಕದ ಅಧ್ಯಕ್ಷ ಗೋಪಣ್ಣ ರಾಥೋಡ್, ಮುಖಂಡ ನಂದೀಶ ನಾಯಕ ಇದ್ದರು.