More

    ನ್ಯಾಯವಾದಿಗಳ ಸಂಘದಿಂದ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ, ಎಲ್ಲಿ, ಯಾವಾಗ, ಹೇಗಿದೆ ಸಿದ್ಧತೆ?

    ವಿಜಯಪುರ: ಐತಿಹಾಸಿಕ ಜಿಲ್ಲೆಯಲ್ಲಿ ಫೆ. 7 ರಿಂದ ನಾಲ್ಕು ದಿನಗಳ ಕಾಲ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.

    ಈಗಾಗಲೇ ಒಂದು ಬಾರಿ ಯಶಸ್ವಿಯಾಗಿ ಪಂದ್ಯಾವಳಿ ನಿರ್ವಹಿಸಲಾಗಿದ್ದು, ಇದೀಗ ಎರಡನೇ ಬಾರಿಗೆ ಆಯೋಜಿಸಲಾಗಿದೆ. ಫೆ. 7 ರಿಂದ 11ರವರೆಗೆ ನಡೆಯಲಿರುವ ಈ ಪಂದ್ಯಾವಳಿಗೆ ರಾಜ್ಯದ 30 ಜಿಲ್ಲೆಗಳಿಂದ ತಂಡಗಳು ನೋಂದಾಯಿಸಿಕೊಂಡಿವೆ ಎಂದು ವಿಜಯಪುರ ನ್ಯಾಯವಾದಿಗಳ ಸಂಘದ ಜಿಲ್ಲಾಧ್ಯಕ್ಷ ಐ.ಜಿ. ಚಾಗಶೆಟ್ಟಿ, ಪ್ರಮುಖರಾದ ಎಸ್.ಎಸ್. ಡೊಂಗರಗಾವಿ, ಬಿ.ಎಸ್. ಸೋರಗಾಂವ, ಕ್ರಿಕೆಟ್ ಟೂರ್ನಿ ಸಂಚಾಲಕ ಜಾಫರ್ ಅಂಗಡಿ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ನ್ಯಾಯವಾದಿಗಳಲ್ಲಿ ಸೌಹಾರ್ದತೆ, ಸಾಮರಸ್ಯ ಮೂಡಿಸಲು ಈ ಟೂರ್ನಿ ಆಯೋಜಿಸಲಾಗಿದೆ. ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಹೊನಲು-ಬೆಳಕಿನಲ್ಲಿ ಈ ಟೂರ್ನಿ ನಡೆಯಲಿದ್ದು, 30 ತಂಡಗಳನ್ನು 10 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಲೀಗ್ ಹಂತದಲ್ಲಿ 10, ನಾಕೌಟ್ ಹಂತದಲ್ಲಿ -12 ಹಾಗೂ ಫೈನಲ್‌ನಲ್ಲಿ 15 ಓವರ್‌ಗಳನ್ನು ನಿಗದಿಪಡಿಸಲಾಗಿದೆ. ಬಿಎಲ್‌ಡಿಇ ವಿವಿಯ ವಿಶಾಲ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ. ಅರ್ಹತೆ ಹೊಂದಿದ ನಿರ್ಣಾಯಕರನ್ನು ಕರೆಯಿಸಲಾಗುತ್ತಿದ್ದು, ಕೇರಳದಿಂದ ತಜ್ಞರನ್ನು ಕರೆಯಿಸಿ ಪಿಚ್ ಸಿದ್ಧಗೊಳಿಸಲಾಗುತ್ತಿದೆ ಎಂದು ಸಂಚಾಲಕ ಜಾಫರ್ ಅಂಗಡಿ ವಿವರಿಸಿದರು.

    ಟೂರ್ನಿಗೆ ಸುಮಾರು 25 ಲಕ್ಷ ರೂ. ಖರ್ಚಾಗಲಿದ್ದು, ನಗದು ಬಹುಮಾನ, ಟ್ರೋಫಿ, ಬೇರೆ ಜಿಲ್ಲೆಗಳ ತಂಡಗಳಿಗೆ ವಸತಿ, ಆಹಾರ ಹೀಗೆ ಒಂದೊಂದು ವ್ಯವಸ್ಥೆಯ ಪ್ರಾಯೋಜಕತ್ವವನ್ನು ಹಿರಿಯ ನ್ಯಾಯವಾದಿಗಳು, ಉದ್ಯಮಿಗಳು ವಹಿಸಿಕೊಂಡಿದ್ದಾರೆ. ಮೊದಲ ಬಹುಮಾನ 1 ಲಕ್ಷ ರೂ, ದ್ವಿತೀಯ ಬಹುಮಾನ 50 ಸಾವಿರ ರೂ. ಹಾಗೂ ತೃತೀಯ ಬಹುಮಾನವನ್ನಾಗಿ 25 ಸಾವಿರ ರೂ. ನಗದನ್ನು ನೀಡಲಾಗುತ್ತಿದೆ ಎಂದರು.

    ವಿಜಯಪುರ ಚ್ಯಾಲೆಂಜರ್ಸ್, ವಿಜಯಪುರ ಟೈಗರ್ಸ್, ಹುನಗುಂದ, ಮಂಗಳೂರು, ಮಂಡ್ಯ, ಬೆಂಗಳೂರು ಮ್ಯಾಜಿಸ್ಟ್ರೇಟ್, ಗದಗ, ಧಾರವಾಡ, ದೊಡ್ಡಬಳ್ಳಾಪುರ, ಮೈಸೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕಲಬುರಗಿ (ಬಿ), ಅಥಣಿ, ಸಿಂದಗಿ, ಕಲಬುರಗಿ (ಎ), ಬೆಳಗಾವಿ, ನೆಲಮಂಗಲ, ಹುಬ್ಬಳ್ಳಿ, ಬಳ್ಳಾರಿ (ಎ), ಚಿತ್ರದುರ್ಗ, ರಾಯಚೂರು, ದೇವನಹಳ್ಳಿ, ಹಾಸನ, ದಾವಣಗೆರೆ (ಎ), ಕೋಲಾರ, ದಾವಣಗೆರೆ (ಬಿ), ಬಳ್ಳಾರಿ (ಬಿ), ಗೋಕಾಕ, ರೋಣ ತಂಡಗಳು ಭಾಗವಹಿಸಲಿವೆ ಎಂದರು.

    ಎಸ್.ಎಸ್. ಡೊಂಗರಗಾವಿ ಅವರು ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ. ಅಬ್ದುಲ್ ಪೀರಾ ಜಮಖಂಡಿ ಊಟದ ವ್ಯವಸ್ಥೆ ಕಲ್ಪಿಸಲಿದ್ದಾರೆ. ವಿನೋದ ವ್ಯಾಸ್ ಅವರು 500 ಮೊಮೆಂಟೋ ಕಲ್ಪಿಸಿದ್ದಾರೆ. ಎಂ.ಎಸ್. ಪಾಟೀಲ ಗಣಿಹಾರ ಫ್ಲೆಕ್ಸ್ ಹಾಗೂ ಬ್ಯಾನರ್, ಐ.ಜಿ. ಚಾಗಶೆಟ್ಟಿ ಮಾಧ್ಯಮ ಪ್ರಸಾರ ವ್ಯವಸ್ಥೆ ಹೀಗೆ ಹಲವರು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ. ಅಂತಿಮ ದಿನದಂದು ಸಚಿವ ಎಂ.ಬಿ. ಪಾಟೀಲ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.

    ನ್ಯಾಯವಾದಿಗಳಾದ ಎಸ್.ಎಸ್. ಮೂಡಲಗಿ, ಎಸ್.ಬಿ. ಜಹಾಗೀರದಾರ, ವಿಲಾಸ ವ್ಯಾಸ, ವಿ.ಎನ್. ಪಾಟೀಲ, ಡಿ.ಜೆ.ಬಿರಾದಾರ, ರಾಜಶೇಖರ ಡೊಳ್ಳಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts