ರಾಮನಗರ: ಬೆಂಗಳೂರು- ಮೈಸೂರು ನಡುವಿನ ದಶಪಥ ಹೆದ್ದಾರಿ ಉದ್ಘಾಟನೆಗೆ ದಿನಗಣನೆ ನಡುವೆಯೇ ಫೆ.28ರಿಂದ ಟೋಲ್ ಸಂಗ್ರಹ ಆರಂಭಗೊಳ್ಳಲಿದೆ. ಬೆಂಗಳೂರು ಬಳಿಯ ಕಣಿಮಿಣಿಕೆ ಮತ್ತು ರಾಮನಗರ ಜಿಲ್ಲೆಯ ಶೇಷಗಿರಿ ಹಳ್ಳಿ ಬಳಿ ಟೋಲ್ ಸಂಗ್ರಹಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಮಂಡ್ಯ ಜಿಲ್ಲೆ ನಿಡಘಟ್ಟವರೆಗೆ 55.63 ಕಿಮೀ ಉದ್ದದ ರಸ್ತೆಗೆ ಶುಲ್ಕ ನಿಗದಿ ಮಾಡಿದೆ. ವಾಹನ ಸವಾರರು ಇನ್ನುಮುಂದೆ ಬೆಂಗಳೂರು – ನಿಡಘಟ್ಟ ವರೆಗಿನ ರಸ್ತೆಗೆ 135 ರೂ. ಟೋಲ್ ಪಾವತಿ ಮಾಡಬೇಕು. ಬಳಕೆ ಆಧಾರಿತ ಟೋಲ್ ರಿಯಾಯ್ತಿ ನೀಡಲಾಗಿದ್ದು, ನಿಗದಿಗಿಂತ ಹೆಚ್ಚಿನ ಭಾರದೊಂದಿಗೆ ಸಂಚರಿಸುವ ವಾಹನಗಳ ಮೇಲೆ ದಂಡ ಪ್ರಯೋಗವೂ ನಡೆಯಲಿದೆ ಎಂಬ ಎಚ್ಚರಿಕೆಯನ್ನು ಪ್ರಾಧಿಕಾರ ನೀಡಿದೆ.
ಇದನ್ನೂ ಓದಿ: ಮದುವೆ ದಿನ ಪರೀಕ್ಷೆ ಬರೆಯಲು ಕಾರಣವೇನೆಂದು ತಿಳಿಸಿದ ವಧು; ಈಕೆಯ ಹಿಂದಿದೆ ಸ್ಫೂರ್ತಿದಾಯಕ ಕಥೆ!
ಬೈಕ್ಗಳಿಗೆ ಸದ್ಯ ನಿರ್ಬಂಧವಿಲ್ಲ
ಬೈಕ್ಗಳು, ತ್ರಿಚಕ್ರ ವಾಹನ ಸಂಚಾರಕ್ಕೆ ಅವಕಾಶವಿಲ್ಲ ಎನ್ನಲಾಗಿತ್ತು. ಆದರೆ, ಸದ್ಯಕ್ಕೆ ಅಂಥ ನಿರ್ಬಂಧ ವಿಧಿಸಿಲ್ಲ. ಹೀಗಿದ್ದೂ ಬೈಕ್ಗಳ ಸಂಚಾರಕ್ಕೆ ಹೆದ್ದಾರಿ ಪ್ರಾಧಿಕಾರ ಕಚೇರಿಗೆ ಪತ್ರ ಬರೆಯಲಾಗಿದೆ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಹೀಗಿದ್ದು, ಸರ್ವಿಸ್ ರಸ್ತೆ ಹೊರತುಪಡಿಸಿ, ಉಳಿದ ಆರು ಪಥಗಳಲ್ಲಿ ಏಕಮುಖ ಸಂಚಾರಕ್ಕೆ ದರ ನಿಗದಿ ಮಾಡಲಾಗಿದೆ.