ಕುಶಾಲನಗರ: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಸ್ವಾಮಿ ಕಣಿವೆ ಗ್ರಾಮದಲ್ಲಿ ಏ.17ರಂದು ಶ್ರೀರಾಮನ ಬ್ರಹ್ಮರಥೋತ್ಸವ ನೆರವೇರಲಿದೆ.
ಮಧ್ಯಾಹ್ನ 1.38 ರಿಂದ 2.18ರ ಶುಭ ಅಭಿಜಿನ್ ಲಗ್ನದಲ್ಲಿ ವೇದಬ್ರಹ್ಮ ನರಹರಿ ಶರ್ಮಾ ನೇತೃತ್ವದ ಅರ್ಚಕರ ತಂಡ ಪೂಜಾ ಕಾರ್ಯಗಳನ್ನು ನೆರವೇರಿಸಲಿದೆ ಎಂದು ರಾಮಲಿಂಗೇಶ್ವರ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್ ತಿಳಿಸಿದ್ದಾರೆ.
ಏ.15ರಿಂದ 21ರವರೆಗೆ ವಿವಿಧ ಪೂಜೆ ನೆರವೇರಿಸಲಾಗುತ್ತದೆ. ರಥೋತ್ಸವ ದಿನ ಹೆಬ್ಬಾಲೆ ಗ್ರಾಮದಿಂದ ಪವಿತ್ರ ಗಂಗೋಧಕವನ್ನು ತರುವುದರ ಮೂಲಕ ದೇವರಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ, ವಸಂತ ಮಾಧವ ಪೂಜೆ, ಕೃಷ್ಣ ಗಂಧೋತ್ಸವ ಹಾಗೂ ರಥ ಬಲಿ ಪೂಜೆ, ರಥರೋಹಣಕ್ಕೆ ಚಾಲನೆ ನೀಡಲಾಗುತ್ತದೆ.
7ದಿನ ಗ್ರಾಮದ ವಿವಿಧ ದೇವರುಗಳ ಪಲ್ಲಕ್ಕಿ ಉತ್ಸವ ಮಾಡಲಾಗುತ್ತೆ. ಪ್ರತಿ ದಿನ ಸಂಜೆ ದೇವಾಲಯದ ಆವರಣದಲ್ಲಿ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.