ಬಾಳೆಹೊನ್ನೂರು: ಸಂಸಾರ ನಿಭಾಯಿಸುವ ಒತ್ತಡದಲ್ಲಿರುವ ಮಹಿಳೆಯರಿಗೆ ಸಂಘಟನೆ ಮೂಲಕ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ ಎಂದು ಬಿಜಿಎಸ್ ಕಾಲೇಜು ಆಡಳಿತ ಸಮಿತಿ ಸದಸ್ಯ ಎಂ.ಕೆ.ಸುಂದರೇಶ್ ಹೇಳಿದರು.
ಇಟ್ಟಿಗೆ ಸೀಗೋಡಿನ ಬಿಜಿಎಸ್ ಕಾಲೇಜು ಆವರಣದಲ್ಲಿ ಚಿಕ್ಕಮಗಳೂರಿನ ನೆಹರು ಯುವ ಕೇಂದ್ರ ಹಾಗೂ ಬೈರವಿ ಮಹಿಳಾ ಒಕ್ಕಲಿಗರ ಸಂಘ ಭಾನುವಾರ ಆಯೋಜಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಮಾನಸಿಕ ದೃಢತೆಗೆ ಕ್ರೀಡಾಕೂಟಗಳು ಸಹಕಾರಿಯಾಗಿದ್ದು, ಸ್ಪರ್ಧೆಗಳಲ್ಲಿ ಭಾಗವಹಿಸುವುದೂ ಮುಖ್ಯ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಭಾವ ಬೆಳೆಸಿಕೊಳ್ಳಬೇಕು ಎಂದರು.
ಬೈರವಿ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಸಿ.ಟಿ.ರೇವತಿ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ಸಂಘಟನೆ ಅನಿವಾರ್ಯವಾಗಿದ್ದು, ಸಮುದಾಯದ ಎಲ್ಲ ಮಹಿಳೆಯರೂ ಸಕ್ರಿಯವಾಗಿ ಕ್ರೀಡಾಕೂಟದಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ರೀಡಾಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ ಮಾಡಿಕೊಡಲಾಗಿದೆ. ಮಲೆನಾಡು ಕಾಫಿ ಹಬ್ಬ ಆಯೋಜಿಸಿ ವಸ್ತು ಪ್ರದರ್ಶನ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಹೋಬಳಿ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಎನ್.ಮರಿಗೌಡ, ದೈಹಿಕ ಶಿಕ್ಷಕರಾದ ರಾಜೇಶ್, ಉಮಾಶಂಕರ್, ಮಹಿಳಾ ಒಕ್ಕಲಿಗರ ಸಂಘದ ಸದಸ್ಯರಾದ ಪ್ರಶಾಂತಿ, ಆಶಾ, ಪ್ರೀತಿ ಉಮೇಶ್, ಸಹನಾ ಇತರರಿದ್ದರು.